ನವದೆಹಲಿ: ಅಫ್ಘಾನಿಸ್ಥಾನದ ಜನರ ಪರವಾಗಿ ಭಾರತ ಸದಾ ನಿಲ್ಲುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಇಂದು ಹೇಳಿದ್ದಾರೆ.ತಜಕಿಸ್ಥಾನ, ಭಾರತ, ರಷ್ಯಾ, ಕಜಕಿಸ್ಥಾನ, ಉಜ್ಬೇಕಿಸ್ಥಾನ, ಇರಾನ್, ಕಿರ್ಗಿಸ್ಥಾನ ಮತ್ತು ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ತಜಕಿಸ್ಥಾನದ ದುಶಾನ್ಬೆಯಲ್ಲಿ ನಡೆದ ಅಫ್ಘಾನಿಸ್ಥಾನದ ಬಗೆಗಿನ 4ನೇ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ದೋವಲ್ ಮಾತನಾಡಿದರು.
ಅಫ್ಘಾನಿಸ್ಥಾನದ ಪರಿಸ್ಥಿತಿಯನ್ನು ಚರ್ಚಿಸಿದ ದೋವಲ್ ಅವರು, ತಾಲಿಬಾನ್ಗೆ ಬಲವಾದ ಸಂದೇಶವನ್ನು ನೀಡಿದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಮತ್ತು ಜಾಗತಿಕ ಭದ್ರತೆಯನ್ನು ಹೆಚ್ಚಿಸಲು ಕಾಬೂಲ್ ನ್ನು ಸಬಲಗೊಳಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಅಫ್ಘಾನಿಸ್ಥಾನ ಮತ್ತು ಪ್ರದೇಶದ ಪರಿಸ್ಥಿತಿಯನ್ನು ತನ್ನ ಪ್ರಾದೇಶಿಕ ಸಹವರ್ತಿಗಳೊಂದಿಗೆ ಚರ್ಚಿಸಿದ ದೋವಲ್, ತಾಲಿಬಾನ್ ಆಳ್ವಿಕೆಯ ದೇಶದಲ್ಲಿ ಭಾರತವು ಪ್ರಮುಖ ಪಾಲುದಾರನಾಗಿ ಉಳಿದಿದೆ ಮತ್ತು ಶತಮಾನಗಳಿಂದ ಅಫ್ಘಾನಿಸ್ಥಾನದ ಜನರೊಂದಿಗಿನ ವಿಶೇಷ ಸಂಬಂಧವು ಭಾರತದ ವಿಧಾನಕ್ಕೆ ಮಾರ್ಗದರ್ಶನ ನಡುತ್ತದೆ ಎಂದರು. ಅಲ್ಲದೇ ಅಫ್ಘಾನ್ ಜನರ ಬಗೆಗಿನ ಭಾರತದ ನಿಲುವು ಈಗಲೂ ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಭಾರತವು ದಶಕಗಳಿಂದ ಅಫ್ಘಾನಿಸ್ಥಾನಕ್ಕೆ ಮೂಲಸೌಕರ್ಯ, ಸಂಪರ್ಕ ಮತ್ತು ಮಾನವೀಯ ನೆರವು ನೀಡುವುದರ ಮೇಲೆ ಕೇಂದ್ರೀಕರಿಸಿದೆ. ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಸ್ಥಾನಕ್ಕೆ ಒಟ್ಟು 50,000 MT ಪೈಕಿ ಈಗಾಗಲೇ 17000 ಮೆಟ್ರಿಕ್ ಟನ್ ಗೋಧಿಯನ್ನು ಭಾರತ ಒದಗಿಸಿದೆ. 5,00,000 ಡೋಸ್ ಕೋವಾಕ್ಸಿನ್, 13 ಟನ್ ಅಗತ್ಯ ಜೀವರಕ್ಷಕ ಔಷಧಗಳು, 60 ಮಿಲಿಯನ್ ಡೋಸ್ ಪೋಲಿಯೊ ಲಸಿಕೆ ಮತ್ತು ಚಳಿಗಾಲದ ಬಟ್ಟೆಗಳನ್ನು ದೇಶಕ್ಕೆ ಕಳುಹಿಸಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಆಫ್ಘನ್ನರಿಗೆ ಸಹಾಯ ಮಾಡುವ ಅಗತ್ಯವನ್ನು ದೋವಲ್ ಒತ್ತಿ ಹೇಳಿದ್ದಾರೆ.