ಕ್ವಚಿದ್ಭೂಮೌ ಶಯ್ಯಾ ಕ್ವಚಿದಪಿ ಚ ಪರ್ಯಂಕಶಯನಂ
ಕ್ವಚಿಚ್ಛಾಕಾಹಾರೀ ಕ್ವಚಿದಪಿ ಚ ಶಾಲ್ಯೋದನರುಚಿಃ |
ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋ
ಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ ||
ಕೆಲವೊಮ್ಮೆ ಭೂಮಿಯೇ ಹಾಸಿಗೆ, ಇನ್ನು ಕೆಲವೊಮ್ಮೆ ಮೆತ್ತನೆಯ ಸುಪ್ಪತ್ತಿಗೆ, ಹಲವೊಮ್ಮೆ ಬರಿಯ ಕಂದಮೂಲಗಳೂಟ, ಮತ್ತೊಮ್ಮೆ ಸೊಗಸಾಗಿ ಬೇಯಿಸಿದ ಶಾಲ್ಯೋದನದೊಸಗೆ, ಒಮ್ಮೊಮ್ಮೆ ಹಳೆಯುಡುಗೆ, ಮಗದೊಮ್ಮೆ ದಿವ್ಯವಸ್ತ್ರಗಳುಡುಗೆ – ಹೀಗೆ ಬದುಕಿನಲ್ಲಿ ದಿನಗಳು ಒಂದೊಂದು ಬಾರಿಗೆ ಒಂದೊಂದು ಬಗೆಯದಾಗಿದ್ದರೂ, ಅವು ಪರಸ್ಪರ ವಿರುದ್ಧವಾದ ಕೊಡುಗೆಗಳನ್ನು ಕೊಡಮಾಡುತ್ತಿದ್ದರೂ ಮನಸ್ವಿಯಾದ ಕಾರ್ಯಕರ್ತನು ದುಃಖವನ್ನಾಗಲೀ ಸುಖವನ್ನಾಗಲೀ ಲೆಕ್ಕಿಸದೆ ತನ್ನ ಕಾರ್ಯಸಾಧನೆಯೊಂದನ್ನು ಮಾತ್ರವೇ ಲಕ್ಷ್ಯವಾಗಿರಿಸಿಕೊಳ್ಳುತ್ತಾನೆ. ಗಮ್ಯದ ಸಾಧನೆಗೆ ಹೊರಟವನಿಗೆ ಮಾರ್ಗದ ಸೊಗವಾಗಲೀ ಕಷ್ಟಗಳಾಗಲೀ ಲೆಕ್ಕಕ್ಕಿರಲಾರವು.
ಶ್ರೀ ನವೀನ ಗಂಗೋತ್ರಿ