ನವರಾತ್ರಿ ವಿಶೇಷ: ಶರನ್ನವರಾತ್ರಿ ದಿನ ಒಂದೊಂದು ದಿನ ಒಂದೊಂದು ಶಕ್ತಿ ದೇವತೆಯ ಆರಾಧನೆಯನ್ನು ಮಾಡಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನ ಆರಾಧಿಸಲಾಗುತ್ತದೆ. ದೇವಿಯ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ.
ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ ತುಂಬಾ ವಿಶೇಷ: ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎನ್ನುವ ಹೆಸರು ಬಂತು. ಕಾತ್ಯಾಯಿನಿ ಎಂದರೆ ಪರೋಪಕಾರದ ಪ್ರತಿರೂಪ. ಕಾತ್ಯಾಯಿನಿ ರೂಪ ಅತ್ಯಂತ ವಿಶೇಷವಾಗಿದ್ದು, ಇವಳು ಸಿಂಹವನ್ನು ವಾಹನವಾಗಿಸಿ ಕೊಂಡವಳು, ಕಾತ್ಯಾಯಿನಿಯದ್ದು ಒಂದು ಭವ್ಯ ಸ್ವರೂಪ, ಇವಳು ಸದಾ ಬಂಗಾರದಂತೆ ಹೊಳೆಯುವಳು, ಈ ದೇವಿಗೆ ನಾಲ್ಕು ಭುಜಗಳು ಬಲಗೈಯ ಮೇಲಿನ ಕೈ ಅಭಯಮುದ್ರೆಯಾಗಿದ್ದರೆ ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವನ್ನು ಹಿಡಿದಿದ್ದಾಳೆ, ಕೆಳಗಿನ ಕೈಯಲ್ಲಿ ಕಮಲವಿದೆ, ಕಾತ್ಯಾಯಿನಿ ದುಷ್ಟರನ್ನು ಸಂಹರಿಸುವ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆ. ಈಕೆಯನ್ನು ಆರಾಧಿಸಿದರೆ ದುಷ್ಟಶಕ್ತಿಗಳ ನಾಶವಾಗುತ್ತವೆ.
ಕಾತ್ಯಾಯಿನಿ ಮೋಕ್ಷ ನೀಡುತ್ತಾಳೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಶ್ರೀ ಕೃಷ್ಣನನ್ನು ಪತಿಯಾಗಿ ಪಡೆಯುವುದಕ್ಕೆ ಗೋಪಿಕೆಯರು ದೇವಿಯನ್ನು ಪೂಜಿಸಿದ್ದರು. ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಪೂಜಿಸಿದರೆ ಶ್ರೇಷ್ಠ ಫಲಗಳನ್ನು ಪಡೆಯಬಹುದು. ಕಾತ್ಯಾಯಿನಿಯ ಆರಾಧನೆಯ ಫಲಗಳು ಅನೇಕ. ಇವಳು ಅಮೋಘ ಫಲಗಳನ್ನು ಕರುಣಿಸುತ್ತಾಳೆ. ಈಕೆಯನ್ನು ಪೂಜಿಸಿದರೆ ಧರ್ಮ, ಅರ್ಥ, ಕಾಮ, ಮೋಕ್ಷ ಪ್ರಾಪ್ತಿಯಾಗುತ್ತದೆ. ಭಯಾನಕ ರೋಗಗಳು ದೂರವಾಗುತ್ತವೆ. ಶೋಕ ಪರಿಹಾರವಾಗುತ್ತೆ, ದುಃಖ ನಿವಾರಣೆಯಾಗಿ ಜನ್ಮಜನ್ಮಾಂತರದ ಪಾಪಗಳು ಪರಿಹಾರವಾಗುತ್ತವೆ, ಜೀವನದಲ್ಲಿ ಉನ್ನತ ಪದವಿ ಪ್ರಾಪ್ತಿಯಾಗುತ್ತದೆ. ಈಕೆಯ ಪೂಜೆಯಿಂದ ಶತ್ರುಗಳ ಶತ್ರುತ್ವದ ಗುಣ ಧ್ವಂಸ ವಾಗುತ್ತದೆ. ಅಷ್ಟೇ ಅಲ್ಲ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯು ಪ್ರಾಪ್ತಿಯಾಗುತ್ತದೆ. ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ ಅತ್ಯಂತ ವಿಶಿಷ್ಟ. ಅಂದು ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಗೊಳ್ಳುತ್ತದೆ, ಯೋಗಸಾಧನೆಯಲ್ಲಿ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವದ್ದು, ಕಾತ್ಯಾಯಿನಿ ಚರಣದಲ್ಲಿ ತಮ್ಮ ಸರ್ವಸ್ವವನ್ನು ಅರ್ಪಿಸಿಕೊಂಡರೆ ದೇವಿಯ ದರ್ಶನವಾಗುತ್ತದೆ.