ಶಿರಸಿ: ರಾತ್ರಿವೇಳೆ ದನಗಳನ್ನು ಕದ್ದೊಯ್ಯುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರನ್ನು ಬಂಧಿಸುವಲ್ಲಿ ಶಿರಸಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಜು.7 ರಂದು ವಿವೇಕಾನಂದನಗರ ಹಾಗೂ ಮರಾಠಿಕೊಪ್ಪದಲ್ಲಿ ನಡೆದ ದನಗಳ್ಳತನ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಪಿಎಸ್ಸೈ ಭೀಮಾಶಂಕರ್ ರವರ ತಂಡವು ಗಸ್ತಿನಲ್ಲಿದ್ದ ವೇಳೆ ಕೋಟೆಕೆರೆ ಬಳಿ ಜಂಕ್ಷನ್ ನಲ್ಲಿ ವಾಹನ ತಪಾಸಣೆ ನಡೆಸುವಾಗ ಟೊಯೋಟಾ ಫ಼ಾರ್ಚೂನರ್ ಹಾಗೂ ಕ್ರೆಟಾ ಕಾರಿನಲ್ಲಿ ಬಂದ ಆರೋಪಿಗಳು ಪೋಲೀಸರಿಗೆ ಹೆದರಿ ವಾಹನ ಬಿಟ್ಟು ಓಡಿಹೋಗಿದ್ದಾರೆ. ಕ್ರೇಟಾ ಕಾರಿನಲ್ಲಿದ್ದ ಇಬ್ಬರನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ದನಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತರನ್ನು ಶಿವಮೊಗ್ಗದ ಈದ್ಗಾನಗರದ ಅಬ್ದುಲ್ ಅಜೀಜ್ (29) ಹಾಗೂ ಬಜಪೆ ದಕ್ಷಿಣ ಕನ್ನಡದ ಫ಼ೈಜಲ್ (36)ಎಂದು ಗುರುತಿಸಲಾಗಿದ್ದು ಉಳಿದ ಮೂವರಾದ ಶಿವಮೊಗ್ಗದ ಇಮ್ರಾನ್ ಅಲಿಯಾಸ್ ಬಾಬು, ಅಯಾಸ್, ರೆಹಮಾನ್ ಎನ್ನುವ ಆರೋಪಿಗಳು ಓಡಿಹೋಗಿದ್ದು ಪೋಲೀಸರು ಅವರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಇವರು ಬೇರೆ ಜಿಲ್ಲೆಯಿಂದ ಶಿರಸಿಗೆ ಬಂದು ದನಗಳನ್ನು ಹೊತ್ತೊಯ್ಯುತ್ತಿರುವುದು ತನಿಖೆ ವೇಳೆ ತಿಳಿದಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ರವಿ ನಾಯ್ಕ, ಡಿ.ಎಸ್.ಪಿ. ಶಿರಸಿಯವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ ಸಿ.ಪಿ.ಐ ಶಿರಸಿ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ ಠಾಣೆಯ ಉಪ ನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ, ಹಾಗೂ ಸಿಬ್ಬಂದಿಗಳಾದ ಮೊಹಮ್ಮದ ಇಸ್ಮಾಯಿಲ್ ಕೋಣನಕೇರಿ, ರಾಮಯ್ಯ ಪೂಜಾರಿ, ಮಹಾಂತೇಶ ಬಾರಕೇರ, ರೋನಾಲ್ಡ್ ಆಲ್ಮೇಡಾ, ಅಶೋಕ ನಾಯ್ಕ, ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ಚೇತನ ನಾಯ್ಕ, ಪ್ರದೀಪ ರೇವಣಕರ ಹಾಗೂ ಶಿರಸಿ ನಗರ ಠಾಣೆಯ ರಾಮದೇವ ಗಾಂವಕರ, ಹಾಗೂ ಚಾಲಕರಾದ ಪಾಂಡು ನಾಗೋಜಿ, ಮೋಹನ ನಾಯ್ಕ ಭಾಗವಹಿಸಿದ್ದರು.