ಯಲ್ಲಾಪುರ: ನೂತನವಾಗಿ ರಚಿತವಾಗಿರುವ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಜೂನ್ 25ರಂದು ಎಪಿಎಂಸಿ ಅಡಕೆ ಭವನದಲ್ಲಿ ನಡೆಯಲಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೂತನ ಸಂಘವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತರಾಜ ಅಧಿನಿಯಮ ಅನುಷ್ಠಾನಕ್ಕೆ ತರುವ, ಮೌಲ್ಯಮಾಪನ ಮಾಡುವ, ಜವಾಬ್ದಾರಿಯನ್ನು ಜನರಿಗೆ ನೀಡುವ ಮೂಲಕ ವಾರ್ಡ್ ಸಭೆ, ಗ್ರಾಮಸಭೆ, ಜನವಸತಿ ಸಭೆಯನ್ನು ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಹಾಗೂ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದನ್ನು ಗ್ರಾಮ ಪಂಚಾಯತದ ಜನಪ್ರತಿನಿಧಿಗಳಿಗೆ ಜವಾಬ್ದಾರಿ. ಆದರೆ ಪದೇ ಪದೇ ನಿಯಮ ಬದಲಾವಣೆ ಮಾಡಿ ಆಗುವ ಅಭಿವೃದ್ಧಿ ಕುಂಠಿತವಾಗಲು ಕಾರಣವಾಗಿದೆ. ಎಲ್ಲರೂ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲು ಮತ್ತು ತಾಲೂಕಿನಲ್ಲಿ ಇರುವ ಎಲ್ಲಾ ಗ್ರಾಮ ಪಂಚಾಯತಗಳಲ್ಲಿಯ ಅನೇಕ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವದಕ್ಕಾಗಿ ತಾಲೂಕಿನ 15 ಗ್ರಾಮ ಪಂಚಾಯತ ಸದಸ್ಯರು ಸೇರಿ ಕರ್ನಾಟಕ ಗ್ರಾಮ ಸ್ವರಾಜ ಕಾಯ್ದೆಯಲ್ಲಿ ಉಲ್ಲೇಖಿಸಿದ ಹಾಗೆ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟವನ್ನು ರಚಿಸಿದ್ದೇವೆ. ಇದು ಕೇವಲ ಗ್ರಾಮ ಪಂಚಾಯತ ಆಗು ಹೋಗುಗಳಿಗೆ ಉತ್ತರ ಕಂಡುಕೊಳ್ಳಲು ಹುಟ್ಟಿದ ಒಕ್ಕೂಟವಾಗಿದೆ ಎಂದರು.
ಒಕ್ಕೂಟದ ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿಯವರು ವಹಿಸಲಿದ್ದು, ಪಂಚಾಯತರಾಜ್ ವ್ಯವಸ್ಥೆಯಾದಾಗಿನಿಂದ ಸತತವಾಗಿ 9 ಬಾರಿ ಆಯ್ಕೆಯಾದ ಇಡಗುಂದಿ ಗ್ರಾ.ಪಂ ಸದಸ್ಯ ಶ್ರೀಕಾಂತ ಶೆಟ್ಟಿ ಇವರನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಸನ್ಮಾನಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ಪಂಚಾಯತ ವಿಕೇಂದ್ರಿಕರಣ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ್, ಚುನಾಯಿತ ಗ್ರಾಮ ಪ್ರತಿನಿಧಿಗಳ ಮಹಾ ಒಕ್ಕೂಟ ಬೆಂಗಳೂರಿನ ಸತೀಶ ಕಾಡಶೆಟ್ಟಿಹಳ್ಳಿ ಇವರು ವಿಶೇಷ ಆಮಂತ್ರಿತರಾಗಿ ಆಗಮಿಸುವರು. ಅತಿಥಿಗಳಾಗಿ ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಗದೀಶ ಕಮ್ಮಾರ್ ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಉಪಾಧ್ಯಕ್ಷ ಗಜಾನನ ಭಟ್ಟ ವಜ್ರಳ್ಳಿ, ಸದಸ್ಯರಾದ ಪ್ರಕಾಶ ಶಾಪುರಕರ, ಇಂದಿರಾ ನಾಯ್ಕ, ಗೋಪಾಲ ಶಾಸ್ತ್ರಿ, ಮಂಜುನಾಥ ಗುಮ್ಮಾನಿ, ಅಮೃತಾ ಪೂಜಾರಿ ಇದ್ದರು.