ನವದೆಹಲಿ: ಹತ್ತು ದಿನಗಳ ಮೆಗಾ ರೆಡ್ ಫೋರ್ಟ್ ಫೆಸ್ಟಿವಲ್ ʼಭಾರತ್ ಭಾಗ್ಯ ವಿಧಾತʼ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಾರಂಭವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ನಿನ್ನೆ ಉತ್ಸವವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇರಾನಿ, ನವ ಭಾರತ ನಿರ್ಮಾಣಕ್ಕೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಕರೆ ನೀಡಿದ್ದನ್ನು ಸ್ಮರಿಸಿದರು.
ಕೆಂಪು ಕೋಟೆಯು ಕೇವಲ ಸ್ಮಾರಕವಾಗದೆ ಜೀವಂತ ಉದಾಹರಣೆಯಾಗಿದ್ದು, ಇದು ಪ್ರತಿ ವರ್ಷ ರಾಷ್ಟ್ರವು ತನ್ನ ಸಂಕಲ್ಪ, ಭರವಸೆ ಮತ್ತು ಸಂವಿಧಾನದ ಬಗ್ಗೆ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಮಾಡುತ್ತದೆ. ʼಭಾರತ್ ಭಾಗ್ಯ ವಿಧಾತʼ ಮೂಲಕ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಒಂದೇ ಸೂರಿನಡಿ ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಸ್ಕೃತಿ ಸಚಿವಾಲಯವು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಭಾರತ ಭಾಗ್ಯ ವಿಧಾತವನ್ನು ಆಯೋಜಿಸುತ್ತಿದೆ.
ಈ ಉತ್ಸವವು ದೇಶದ ಪರಂಪರೆ ಮತ್ತು ಭಾರತದ ಪ್ರತಿಯೊಂದು ಭಾಗದ ಸಂಸ್ಕೃತಿಯನ್ನು ನೆನಪಿಸುವ ಗುರಿಯನ್ನು ಹೊಂದಿದೆ. ಭಾರತ ಭಾಗ್ಯ ವಿಧಾತ ಹಬ್ಬವು ಭಾರತದ ವೈವಿಧ್ಯತೆಯನ್ನು ಶ್ಲಾಘಿಸಲು ಎಲ್ಲರಿಗೂ ಸಹಾಯ ಮಾಡುತ್ತದೆ. 70 ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಕಲೆಗಾರಿಕೆಯನ್ನು ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ.