ನವದೆಹಲಿ: ಶ್ರೀಲಂಕಾ ದೊಡ್ಡ ಮಟ್ಟದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರ ವಿದೇಶಿ ಮೀಸಲು ಖಾಲಿಯಾಗಿದೆ ಮತ್ತು ಆಹಾರ ಆಮದಿಗೆ ಹಣವಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ಬಹುತೇಕ ಎಲ್ಲಾ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಈ ನಡುವೆ ಕೊಲಂಬೊಗೆ ಭಾರತ 900 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ಘೋಷಿಸಿದೆ. ಇದಾದ ಕೆಲವು ದಿನಗಳಲ್ಲಿ ಬಂದರುಗಳು, ಮೂಲಸೌಕರ್ಯ, ಇಂಧನ, ವಿದ್ಯುತ್ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಮಾಡುವಂತೆ ಶ್ರೀಲಂಕಾ ಭಾರತವನ್ನು ಒತ್ತಾಯಿಸಿದೆ.
ಶ್ರೀಲಂಕಾದ ಹಣಕಾಸು ಸಚಿವ ಬಾಸಿಲ್ ರಾಜಪಕ್ಸೆ ಅವರು ಶನಿವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು, ಈ ಸಂದರ್ಭದಲ್ಲಿ ಇಬ್ಬರು ಸಚಿವರು ದ್ವೀಪ ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವ ಭಾರತದ ಯೋಜನೆಗಳು ಮತ್ತು ಹೂಡಿಕೆ ಯೋಜನೆಗಳ ಕುರಿತು ಚರ್ಚಿಸಿದ್ದಾರೆ.
ಆರ್ಥಿಕ ಪ್ಯಾಕೇಜ್ಗಾಗಿ ಭಾರತಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ, ಶ್ರೀಲಂಕಾದಲ್ಲಿ ಹೆಚ್ಚಿನ ಭಾರತೀಯ ಹೂಡಿಕೆಗಳನ್ನು ರಾಜಪಕ್ಸೆ ಸ್ವಾಗತಿಸಿದರು ಮತ್ತು ಎರಡೂ ಕಡೆಯವರಿಗೆ ಅನುಕೂಲವಾಗುವಂತಹ ಅನುಕೂಲಕರ ವಾತಾವರಣವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಶ್ರೀಲಂಕಾದೊಂದಿಗೆ ಭಾರತದ ದೀರ್ಘಾವಧಿಯ ಸಹಕಾರವನ್ನು ರಾಜಪಕ್ಸೆ ನೆನಪಿಸಿಕೊಂಡಿದ್ದಾರೆ.
ಬಂದರುಗಳು, ಮೂಲಸೌಕರ್ಯ, ಇಂಧನ, ನವೀಕರಿಸಬಹುದಾದ ಇಂಧನ, ವಿದ್ಯುತ್ ಮತ್ತು ಉತ್ಪಾದನೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಹೂಡಿಕೆಯನ್ನು ಸ್ವಾಗತಿಸಿದ ಅವರು, ಅಂತಹ ಹೂಡಿಕೆಗಳನ್ನು ಪೆÇ್ರೀತ್ಸಾಹಿಸಲು ಅನುಕೂಲಕರ ವಾತಾವರಣವನ್ನು ಒದಗಿಸಲಾಗುವುದು ಎಂದಿದ್ದಾರೆ ಎಂದು ಭಾರತದ ಅಧಿಕೃತ ಪ್ರಕಟನೆ ತಿಳಿಸಿದೆ.
ಸಭೆಯಲ್ಲಿ, ಟ್ರಿಂಕೋಮಲಿ ತೈಲ ಟ್ಯಾಂಕ್ ಫಾರ್ಮ್ಗಳನ್ನು ಜಂಟಿಯಾಗಿ ಆಧುನೀಕರಿಸಲು ಶ್ರೀಲಂಕಾ ತೆಗೆದುಕೊಂಡ ಇತ್ತೀಚಿನ ಕ್ರಮಗಳು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಇಬ್ಬರೂ ಸಚಿವರು ಗಮನಿಸಿದರು.
ಭಾರತವು ಸದಾ ಶ್ರೀಲಂಕಾದೊಂದಿಗೆ ನಿಲ್ಲುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಆರ್ಥಿಕ ಮತ್ತು ಇತರ ಸವಾಲುಗಳನ್ನು ಜಯಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಶ್ರೀಲಂಕಾಗೆ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಜೈಶಂಕರ್ ತಿಳಿಸಿದ್ದಾರೆ.