ವರಂ ದರಿದ್ರಃ ಶ್ರುತಿಶಾಸ್ತ್ರಪಾರಗೋ ನ ಚಾಪಿ ಮೂರ್ಖೋ ಬಹುರತ್ನಸಂಯುತಃ
ಸುಲೋಚನಾ ಜೀರ್ಣಪಟಾಪಿ ಶೋಭತೇ ನ ನೇತ್ರಹೀನಾ ಕನಕೈರಲಂಕೃತಾ ||
ವೇದ ವೇದಾಂಗಗಳನ್ನು ತಿಳಿದ ವಿದ್ವಾಂಸನೊಬ್ಬ ಬಡವನಾಗಿದ್ದರೂ ಆತನು ಶ್ರೇಷ್ಠನೇ ಆಗಿರುತ್ತಾನೆ. ಮೂರ್ಖನಾದವನು ರತ್ನಾದಿ ಆಭರಣಗಳನ್ನು ಹೊಂದಿದ್ದರೂ ಸಹ ಸ್ವೀಕಾರ್ಯನಾಗುವುದಿಲ್ಲ. ಚಂದದ ಕಣ್ಣುಳ್ಳ ಸುಂದರಿಯೊಬ್ಬಳು ಅಷ್ಟೇನೂ ಆಕರ್ಷಕವಲ್ಲದ ಬಟ್ಟೆ ತೊಟ್ಟಿದ್ದರೂ ಚಂದವಾಗೇ ಕಾಣುತ್ತಾಳೆ. ಅವಳ ಸೌಂದರ್ಯದ ಗುಟ್ಟು ಬಟ್ಟೆಯಲ್ಲ, ಆಕೆ ಸಹಜ ಸುಂದರಿಯಾಗಿರುತ್ತಾಳೆ. ಅದೇ ಒಬ್ಬಾಕೆಗೆ ಕಣ್ಣೇ ಇಲ್ಲದಿದ್ದರೆ ಅದೆಷ್ಟು ಬಂಗಾರದ ಅಲಂಕಾರ ಮಾಡಿದರೂ ಆಕೆ ಸುಂದರಿಯಾಗಿ ಕಾಣಲಾರಳು. ಹಾಗೇನೆ ವಿದ್ವಜ್ಜನನು ಬಡವನಾಗಿದ್ದರೂ ವಂದ್ಯನಾಗುತ್ತಾನೆ, ಮೂರ್ಖನು ಕುಲೀನನೂ ಆಢ್ಯನೂ ಆಗಿದ್ದರೂ ಗರ್ಹ್ಯನಷ್ಟೆ. ಇಂದೂ ಸಹ ಸಮಾಜದಲ್ಲಿ, ನಮ್ಮ ರಾಜಕೀಯ ವಲಯದಲ್ಲಿ ಶುದ್ಧಾಂಗ ಪೆದ್ದರೂ ಮೂರ್ಖರೂ ಆದ ಶ್ರೀಮಂತರನ್ನು ಜನರು ಆದರಿಸದೇ ಇರುವುದನ್ನು ಕಾಣಬಹುದಾಗಿದೆ. ಬಡವರಾಗಿದ್ದೂ ಮುತ್ಸದ್ದಿಗಳಾದವರನ್ನೂ ಇಲ್ಲಿ ನೋಡಬಹುದು. ಶ್ರೀ ನವೀನ ಗಂಗೋತ್ರಿ