ನವದೆಹಲಿ: ಫೆಬ್ರವರಿ 27, 2019 ರಂದು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ‘ವೀರ ಚಕ್ರ’ವನ್ನು ಪ್ರದಾನ ಮಾಡಿದರು.
2019 ರಲ್ಲಿ ನಡೆದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತ ಬಾಲಕೋಟ್ ವೈಮಾನಿಕ ದಾಳಿ ನಡೆಸಿತ್ತು. ಮರುದಿನ ಪಾಕಿಸ್ಥಾನ ಭಾರತದ ವಾಯು ವಲಯದೊಳಗೆ ತನ್ನ ಯುದ್ಧ ವಿಮಾನಗಳನ್ನು ನುಗ್ಗಿಸಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ಥಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದರು. ಈ ಪ್ರಕ್ರಿಯೆಯಲ್ಲಿ, ಅವರು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದೊಳಗೆ ವಿಮಾನಪತನಗೊಂಡು ಬಿದ್ದರು, ಹೀಗಾಗಿ ಶತ್ರ ರಾಷ್ಟ್ರ ಅವರನ್ನು ಸೆರೆ ಹಿಡಿಯಿತು.
ನಂತರ ಅವರನ್ನು ಪಾಕಿಸ್ಥಾನ ಸೇನೆ ವಶಕ್ಕೆ ತೆಗೆದುಕೊಂಡಿತ್ತು. ಈ ವಿಷಯದಲ್ಲಿ ಅಂತರರಾಷ್ಟ್ರೀಯ ಹಸ್ತಕ್ಷೇಪದ ಜೊತೆಗೆ ಭಾರತದ ಕಡೆಯಿಂದ ಹೇರಿದ ವ್ಯಾಪಕ ಒತ್ತಡದಿಂದಾಗಿ ಪಾಕಿಸ್ಥಾನದ ಸೇನೆಯು ಅವರನ್ನು ಬಿಡುಗಡೆ ಮಾಡಿತು.
ಅಭಿನಂದನ್ ಶ್ರೀನಗರ ಮೂಲದ 51 ಸ್ಕ್ವಾಡ್ರನ್ನ ಭಾಗವಾಗಿದ್ದರು ಮತ್ತು ಫೆಬ್ರವರಿ 27, 2019 ರಂದು ಪಾಕಿಸ್ತಾನಿಗಳು ನಡೆಸಿದ ವೈಮಾನಿಕ ದಾಳಿಯನ್ನು ತಡೆದಿದ್ದರು. ಈ ಕಾರಣಕ್ಕಾಗಿ ಅವರಿಗೆ ವೀರ ಚಕ್ರ ನೀಡಿ ಗೌರವಿಸಲಾಗಿದೆ. ಇತ್ತೀಚಿಗೆ ವರ್ಧಮಾನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಆಗಿ ಭಡ್ತಿ ಮಾಡಲಾಗಿದೆ.
ನ್ಯೂಸ್ 13