ನವದೆಹಲಿ: ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪದ್ಮ ಪ್ರಶಸ್ತಿ 2020ಗಳನ್ನು ಪ್ರದಾನ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಜಾರ್ಜ್ ಫರ್ನಾಂಡಿಸ್ ಮತ್ತು ಸುಷ್ಮಾ ಸ್ವರಾಜ್, ಶಾಸ್ತ್ರೀಯ ಗಾಯಕ ಪಂಡಿತ್ ಛನ್ನುಲಾಲ್ ಮಿಶ್ರಾ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ಅರುಣ್ ಜೇಟ್ಲಿ ಅವರ ಪತ್ನಿ ಸಂಗೀತಾ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಪದ್ಮಭೂಷಣ ಪಡೆದರು.
ಕರ್ನಾಟಕದವರಾದ ಹರೇಕಳ ಹಾಜಬ್ಬ, ಎಂಪಿ ಗಣೇಶ್, ವಿದೂಷಿ ಕೆ.ಎಸ್ ಜಯಲಕ್ಷ್ಮಿ, ಶ್ರೀ ಕೆವಿ ಸಂಪತ್ ಕುಮಾರ್(ಮರಣೋತ್ತರ) ಪದ್ಮಶ್ರೀ ಪಡೆದಿದ್ದಾರೆ.
ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಗಾಯಕ ಅದ್ನಾನ್ ಸಮಿ, ಐಸಿಎಂಆರ್ನ ಮಾಜಿ ಮುಖ್ಯ ವಿಜ್ಞಾನಿ ಡಾ ರಾಮನ್ ಗಂಗಾಖೇಧಕರ್, ನಟಿ ಕಂಗನಾ ರಣಾವತ್, ಪರಿಸರವಾದಿ ಹಿಮ್ಮತರಾಂ ಭಂಭು ಮತ್ತು ಹಿರಿಯ ರಂಗಭೂಮಿ ಮತ್ತು ದೂರದರ್ಶನ ಕಲಾವಿದೆ ಸರಿತಾ ಜೋಷಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಪ್ರಮುಖರು.
2020 ರಲ್ಲಿ ಗಣರಾಜ್ಯೋತ್ಸವದ ಮುನ್ನಾದಿನದಂದು ಸರ್ಕಾರವು 141 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ಈ ಪಟ್ಟಿಯು ಏಳು ಪದ್ಮವಿಭೂಷಣ, 16 ಪದ್ಮಭೂಷಣ ಮತ್ತು 118 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ.
ನ್ಯೂಸ್ 13