eUK ವಿಶೇಷ: ಒಲಂಪಿಕ್ಸ್ ನಲ್ಲಿ ಜಾವಲಿನ್ ಎಸೆತದಲ್ಲಿ ಬಂಗಾರದ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ನೀರಜ್ ಛೋಪ್ರಾ ರವರ ಸಾಧನೆ ಅಮೋಘವಾದದ್ದು.
ಆದರೆ ಈ ಸಾಧನೆಯ ಹಿಂದೆ ಶಿರಸಿಯವರೊಬ್ಬರ ಶ್ರಮ ಇದೆ ಎಂಬುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಹೌದು! ನೀರಜ್ ಛೋಪ್ರಾರ ಈ ಸಾಧನೆಯ ಹಿಂದೆ ಗುರುವಾಗಿ ಅವರ ಸಾಧನೆಗೆ ಮಾರ್ಗದರ್ಶನ ಮಾಡಿದವರು ಶಿರಸಿಯ ಬೆಂಗಳೆ ಊರಿನವರಾದ ಕಾಶೀನಾಥ ನಾಯ್ಕ. ಹೆಚ್ಚಿನ ತರಬೇತಿಗಾಗಿ ನೀರಜ್ ಚೋಪ್ರಾ ಇತ್ತಿಚೆಗೆ ಸ್ವೀಡನ್ ಗೆ ತೆರಳಿದ್ದರು ಎಂಬ ಮಾಹಿತಿ ಇದೆ. ಭಾರತೀಯ ಸೇನೆಯಲ್ಲಿ ‘ಸುಭೇದಾರ್’ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತುದಾರರಾಗಿರುವ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಒಲಂಪಿಕ್ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಜಾವಲಿನ್ ತರಬೇತಿ ನೀಡುತ್ತಿದ್ದಾರೆ.
23 ವರ್ಷದಿಂದ ಸೈನ್ಯದಲ್ಲಿ ಸೇವೆಯಲ್ಲಿರುವ ಕಾಶಿನಾಥ 2010ರ ನವದೆಹಲಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಈವರೆಗೆ ನೂರಾರು ಜನರಿಗೆ ತರಬೇತಿ ನೀಡಿ, ಸಾಧನೆ ತೋರುವಂತೆ ಮಾಡಿದ್ದಾರೆ.
ಪ್ರಸ್ತುತ ಟೊಕೊಯೋ ಒಲಂಪಿಕ್ಸ್ ನಲ್ಲಿ ಕಾಶೀನಾಥ ಅವರ ಶಿಷ್ಯರಾದ ಶಿವಪಾಲ್ ಸಿಂಗ್ ಹಾಗೂ ಅನ್ನುರಾಣಿ ಕೂಡ ಭಾಗವಹಿಸಿದ್ದರು.
ಪ್ರಸ್ತುತ ನೀರಜ್ ಛೋಪ್ರಾ ರವರ ಗೆಲುವಿನ ಹಿಂದೆ ಕಾಶೀನಾಥ್ ಕಲಿಸಿಕೊಟ್ಟ ಗೆಲುವಿನ ಸೂತ್ರವಿದೆ. ಆ ಮೂಲಕ ಭಾರತಕ್ಕೆ ಒಲಂಪಿಕ್ ನಲ್ಲಿ ದಕ್ಕಿರುವ ಚಿನ್ನದ ಹಿರಿಮೆಯಲ್ಲಿ ಜಿಲ್ಲೆಯ ಯೋಧನದು, ತನ್ಮೂಲಕ ಜಿಲ್ಲೆಗೂ ಒಂದು ಪಾಲಿದೆ.