ನವದೆಹಲಿ: ಪರಮಾಣು ಶಸ್ತ್ರಾಸ್ತ್ರ ರಹಿತ ಜಗತ್ತು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಸೋಮವಾರ ಹೇಳಿದ್ದಾರೆ. ಅಲ್ಲದೇ, ಅಣ್ವಸ್ತ್ರ ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಕ್ರಮ ಪ್ರಸರಣದ ವಿರುದ್ಧ ಕೆಲಸ ಮಾಡುವಂತೆ ದೇಶಗಳಿಗೆ ಕರೆ ನೀಡಿದ್ದಾರೆ.
`ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣವಿಲ್ಲದಿರುವಿಕೆ: ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದ’ ಕುರಿತ ಯುಎನ್ಎಸ್ಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಸಮುದಾಯವು ಪರಮಾಣು ಶಸ್ತ್ರಾಸ್ತ್ರಗಳ ಜಾಲಗಳ ಅಕ್ರಮ ಪ್ರಸರಣ, ಘಟಕಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳು, ಅವುಗಳ ವಿತರಣಾ ವ್ಯವಸ್ಥೆಗಳ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ ಎಂದಿದ್ದಾರೆ.
ಪರಮಾಣು ಸ್ಫೋಟಕಗಳ ಪರೀಕ್ಷೆಯ ಮೇಲೆ ಭಾರತ ಸ್ವಯಂಪ್ರೇರಿತ ಮತ್ತು ಏಕಪಕ್ಷೀಯ ನಿಯಂತ್ರಣವನ್ನು ಹೇರಿದೆ ಎಂದು ಅವರು ತಿಳಿಸಿದ್ದಾರೆ.
`ಜಾಗತಿಕ ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಪ್ರಯತ್ನಗಳಲ್ಲಿ ಭಾರತವು ಪ್ರಮುಖ ಪಾಲುದಾರ. ಈ ಸಂದರ್ಭದಲ್ಲಿ ನಾವು ಕೈಗೊಂಡ ಒಂದು ಪ್ರಮುಖ ಹೆಜ್ಜೆಯೆಂದರೆ 2002 ರಿಂದ ಭಯೋತ್ಪಾದಕರು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವ ಕ್ರಮಗಳ ಕುರಿತ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ನಿರ್ಣಯದ ಪೈಲಟ್ ಆಗಿರುವುದು, ಇದನ್ನು ಒಮ್ಮತದಿಂದ ಅಳವಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.
ಭದ್ರತಾ ಮಂಡಳಿಯ ನಿರ್ಣಯ 1540ಯು ಜಾಗತಿಕ ಪ್ರಸರಣ ತಡೆ ಪ್ರಯತ್ನಗಳಿಗೆ ಪ್ರಮುಖ ಸಾಧನವಾಗಿದೆ ಎಂದು ಶೃಂಗ್ಲಾ ಹೇಳಿದ್ದಾರೆ.
ಪ್ರಸರಣ ರಹಿತ ಪರಿಸರ ಬಲಪಡಿಸಲು, ಭಾರತವು ವಿವಿಧ ರಫ್ತು ನಿಯಂತ್ರಣ ದೇಶಗಳನ್ನು ಸೇರಿಕೊಂಡಿದೆ. ಅದೆಂದರೆ ಆಸ್ಟ್ರೇಲಿಯಾ ಗ್ರೂಪ್, ವಾಸ್ಸೆನಾರ್ ಅರೇಂಜ್ಮೆಂಟ್, ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ ಇತ್ಯಾದಿ.
`ಅಂತರಾಷ್ಟ್ರೀಯ ಸಮುದಾಯವು ಪರಮಾಣು ಶಸ್ತ್ರಾಸ್ತ್ರ ಮುಕ್ತ ಪ್ರಪಂಚಕ್ಕಾಗಿ ತಮ್ಮ ಸಾಮೂಹಿಕ ಆಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ನಾವು ಆಶಿಸುತ್ತೇವೆ’ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.
ನ್ಯೂಸ್ 13