ಶಿರಸಿ: ತಾಲೂಕಿನ ಕೊಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿಗದ್ದೆ-ಸೊಣಗಿನಮನೆ- ಗಣೇಶಪಾಲ್ ರಸ್ತೆಯಲ್ಲಿ ದುಃಸ್ಥಿತಿ ನಿರ್ಮಾಣವಾಗಿದೆ.
ಒಂದು ಕಿ.ಮೀ. ನಷ್ಟು ಕಚ್ಚಾರಸ್ತೆ ಇದ್ದು, ಅದು ಜುಲೈನಲ್ಲಿ ಸುರಿದ ಅತಿವೃಷ್ಟಿಗೆ ಹಲವೆಡೆ ಕುಸಿದಿದೆ. ಕೆಲವೆಡೆ ದೊಡ್ಡ ಕಂದಕಗಳೇ ನಿರ್ಮಾಣವಾಗಿವೆ. ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದರೆ ಇದೇ ಮಾರ್ಗ ಬಳಸಿ ಯಲ್ಲಾಪುರ ಪಟ್ಟಣಕ್ಕೆ ಜಡ್ಡಿಗದ್ದೆ ಭಾಗದವರು ಹೆಚ್ಚು ಜನ ತೆರಳುತ್ತಿದ್ದರು. ಈಗ ದೊಡ್ಡ ಕಂದಕವೇ ಬಿದ್ದು ಸಂಪರ್ಕ ಕಳಚಿದೆ ಎಂದು ಕೊಡಗದ್ದೆ ಗ್ರಾಮ ಪಂಚಾಯ್ತಿ ಸದಸ್ಯ ಪ್ರವೀಣ ಹೆಗಡೆ ಹೇಳಿದರು. ಜತೆಗೆ ತಕ್ಷಣ ರಸ್ತೆ ದುರಸ್ತಿ ಮಾಡಿಸುವಂತೆಯೂ ಆಗ್ರಹಿಸಿದರು.