ಬೆಂಗಳೂರು: ವಿದ್ಯುದ್ದೀಕರಣಗೊಂಡ ಮಹಾರಾಷ್ಟ್ರದ ರೋಹಾ ಹಾಗೂ ಮಂಗಳೂರಿನ ತೋಕೂರು ನಡುವಿನ 740 ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುತ್ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಸೋಮವಾರ ಹಸಿರು ನಿಶಾನೆ ತೋರಿದರು.
ಬೆಂಗಳೂರು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ ಶೇ.100 ವಿದ್ಯುದ್ದೀಕರಣಗೊಂಡ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡುತ್ತಿದ್ದಂತೆ ಉಡುಪಿ, ಮಡಗಾಂವ್ ಹಾಗೂ ರತ್ನಗಿರಿಯ ಕೊಂಕಣ ರೈಲು ನಿಲ್ದಾಣಗಳಿಂದ ರೈಲುಗಳು ತಮ್ಮ ಸಂಚಾರವನ್ನು ಪ್ರಾರಂಭಿಸಿದವು. 740 ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗ ಮಹಾರಾಷ್ಟ್ರ (382 ಕಿ.ಮೀ.), ಗೋವಾ (106ಕಿ.ಮೀ.) ಹಾಗೂ ಕರ್ನಾಟಕ (252ಕಿ.ಮೀ.)ಗಳ ಮೂಲಕ ಹಾದು ಹೋಗುತ್ತದೆ. ಈ ಮಾರ್ಗದಲ್ಲಿ 970 ಕಿ.ಮೀ. ಹಳಿಗಳಿದ್ದು, ಇವುಗಳಲ್ಲಿ 513 ಮಹಾರಾಷ್ಟ್ರದಲ್ಲಿ, 163 ಕಿ.ಮೀ. ಗೋವಾದಲ್ಲಿ ಹಾಗೂ 294 ಕಿ.ಮೀ. ಕರ್ನಾಟಕದಲ್ಲಿವೆ.
740 ಕಿ.ಮೀ. ಉದ್ದದ ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಒಟ್ಟು 1,287 ಕೋಟಿ ರೂ. ವೆಚ್ಚವಾಗಿದ್ದು, ಇದನ್ನು ಐದು ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. ತೋಕೂರಿನಿಂದ ಬಿಜೂರುವರೆಗೆ, ಬಿಜೂರಿನಿಂದ ಕಾರವಾರದವರೆಗೆ, ಕಾರವಾರದಿಂದ ತೀವಿಂವರೆಗೆ, ತೀವಿಂನಿAದ ರತ್ನಗಿರಿ ಹಾಗೂ ರತ್ನಗಿರಿಯಿಂದ ರೋಹಾದವರೆಗೆ ಕಾಮಗಾರಿ ನಡೆದು 2022ರ ಮಾರ್ಚ್ ಕೊನೆಯಲ್ಲಿ ಪೂರ್ಣಗೊಂಡಿತ್ತು. ಕೊಂಕಣ ರೈಲು ಮಾರ್ಗದ ವಿದ್ಯುದ್ದೀಕರಣದಿಂದಾಗಿ ಕೊಂಕಣ ರೈಲ್ವೆಗೆ ವಾರ್ಷಿಕ 300ಕೋಟಿ ರೂ. ಉಳಿತಾಯವಾಗಲಿದೆ. ಇದರಲ್ಲಿ ಇಂಧನ ಒಂದರಿAದಲೇ ವರ್ಷಕ್ಕೆ 180 ಕೋಟಿ ರೂ. ವೆಚ್ಚ ಉಳಿತಾಯವಾದರೆ, ಇತರ ನಿರ್ವಹಣಾ ವೆಚ್ಚವೂ 120 ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ. ರೈಲು ಹೆಚ್ಚು ವೇಗದಲ್ಲಿ ಚಲಿಸುವುದರೊಂದಿಗೆ ಪರಿಸರ, ವಾಯು ಹಾಗೂ ಶಬ್ದ ಮಾಲಿನ್ಯಗಳೂ ತೀರಾ ಕೆಳಮಟ್ಟಕ್ಕೆ ಇಳಿಯಲಿದೆ ಎಂದು ಕೊಂಕಣ ರೈಲ್ವೆಯ ಕ್ಷೇತ್ರೀಯ ರೈಲ್ವೆ ಪ್ರಬಂಧಕ ಬಿ.ಬಿ.ನಿಕ್ಕಂ ತಿಳಿಸಿದ್ದಾರೆ.