ನವದೆಹಲಿ: 2022 ರವರೆಗೆ ಇನ್ನೂ ಆರು ತಿಂಗಳವರೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ PM-GKAY ಅನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ನಿರ್ಧಾರವಾಗಿದ್ದು, ಇದರಿಂದ ದೇಶದ 80 ಕೋಟಿಗೂ ಹೆಚ್ಚು ಜನರು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
“ಯೋಜನೆಯಡಿ ಮೊದಲಿನಂತೆಯೇ ದೇಶದ 80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಶಕ್ತಿಯಲ್ಲಿ ಭಾರತದ ಶಕ್ತಿ ಅಡಗಿದೆ. ಈ ಶಕ್ತಿಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರವು ಯೋಜನೆಯನ್ನು ವಿಸ್ತರಿಸಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾದ PM-GKAY ಯ ಹಂತ-5 ಈ ತಿಂಗಳು ಕೊನೆಗೊಳ್ಳಬೇಕಿತ್ತು.
ಸರ್ಕಾರವು ಇಲ್ಲಿಯವರೆಗೆ ಸರಿಸುಮಾರು 2.60 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಮುಂದಿನ ಆರು ತಿಂಗಳಲ್ಲಿ ಸೆಪ್ಟೆಂಬರ್ 2022 ರವರೆಗೆ 80 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ, PM-GKAY ಅಡಿಯಲ್ಲಿ ಒಟ್ಟು ವೆಚ್ಚವನ್ನು ಸುಮಾರು 3.40 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದು ಭಾರತದಾದ್ಯಂತ ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಳ್ಳುತ್ತದೆ ಮತ್ತು ಮೊದಲಿನಂತೆ ಇದಕ್ಕೆ ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಹಣವನ್ನು ನೀಡಲಾಗುತ್ತದೆ.
ಈ ಯೋಜನೆಯಡಿಯಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಗೊಂಡಿರುವ ಎಲ್ಲಾ ಫಲಾನುಭವಿಗಳಿಗೆ ಕೇಂದ್ರವು ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತದೆ.