ಸಿದ್ದಾಪುರ:ಮಕ್ಕಳಿಗೆ ಹಣಗಳಿಸಿ ಎಂದು ಹೇಳುವುದಕ್ಕಿಂತ ಉತ್ತಮ ಗುಣವನ್ನು ಬೆಳೆಸುವುದು ಮುಖ್ಯ. ಮಹಿಳೆಯರು ಜಾಗೃತರಾಗಿದ್ದರೆ ಮಾತ್ರ ಆರ್ಥಿಕವಾಗಿ ಸದೃಡವಾಗಲು ಸಾಧ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಸುಧೀರ್ ಬಿ.ಗೌಡರ್ ಬಾಳೇಕುಳಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಣೇಶಮಂಟಪದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಕೌಶಾಲಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಪಂ ಹಾಗೂ ತಾಪಂ, ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಗಳ ಆಶ್ರಯದಲ್ಲಿ ಸಂಜೀವಿನಿ ಮಾಸಿಕ ಸಂತೆ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
ಹಾರ್ಸಿಕಟ್ಟಾ ಗ್ರಾಪಂ ಪಿಡಿಒ ರಾಜೇಶ ನಾಯ್ಕ ಮಾತನಾಡಿ ಮಹಿಳೆಯರು ಬೌದ್ಧಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದುವುದಕ್ಕೆ ಕ್ರೀಯಾಶೀಲ ಚಟುವಟಿಕೆಗಳು ಅತ್ಯವಶ್ಯ. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅದರ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರು.
ಗ್ರಾಪಂ ಉಪಾಧ್ಯಕ್ಷ ಶಾಂತಕುಮಾರ ಎಸ್.ಪಾಟೀಲ್, ಸದಸ್ಯೆ ಸರೋಜಾ ನಾಯ್ಕ ಹಳಿಯಾಳ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಡಾ.ಶ್ರೇಯಸ್ ಬಿ.ರಾಜ್, ಎನ್ಆರ್ಎಲ್ಎಂನ ಮಾಲತಿ ನಾಯ್ಕ, ಉಷಾ, ಮಾನಸ ಉಪಸ್ಥಿತರಿದ್ದರು.
ಸುಧಾ ಹೆಗಡೆ, ಪಾವನಾ ಹೆಗಡೆ, ಶೋಭಾ ಹೆಗಡೆ, ಪ್ರೇಮಾ ಜಿ.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.