ನವದೆಹಲಿ: ಬಿಜೆಪಿ ಸಂಘಟನೆಯಲ್ಲಿರಲಿ ಅಥವಾ ಸರ್ಕಾರದಲ್ಲಿರಲಿ ಜನರ ಸೇವೆಗೆ ಸದಾ ತೊಡಗಿಸಿಕೊಂಡಿರುತ್ತದೆ ಮತ್ತು ಬದ್ಧವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಸಬ್ಕಾ ಸಾಥ್ ಮತ್ತು ಸಬ್ಕಾ ವಿಕಾಸ್ ಮಂತ್ರದೊಂದಿಗೆ ಕೆಲಸ ಮಾಡುತ್ತದೆ ಎಂದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ಕೇಳಲಾದ ಪ್ರಶ್ನೆಗೆ, ಎಲ್ಲಾ ಐದು ರಾಜ್ಯಗಳಲ್ಲಿ ಬಿಜೆಪಿಯ ಅಲೆಯನ್ನು ನೋಡಬಹುದು ಮತ್ತು ಅದು ಪ್ರಚಂಡ ಬಹುಮತದಿಂದ ಗೆಲ್ಲುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲಿ ಬಿಜೆಪಿಗೆ ಸ್ಥಿರತೆಯಿಂದ ಕೆಲಸ ಮಾಡಲು ಅವಕಾಶ ಸಿಕ್ಕಿದೆಯೋ ಅಲ್ಲೆಲ್ಲ ಅಧಿಕಾರದ ಪರವಾದ ವಾತಾವರಣವಿದೆಯೇ ಹೊರತು ಆಡಳಿತ ವಿರೋಧಿಯಲ್ಲ ಎಂದಿದ್ದಾರೆ.
ಕೃಷಿ ಕಾನೂನುಗಳ ಕುರಿತು ಮಾತನಾಡಿದ ಪ್ರಧಾನಿ, ಕೃಷಿ ಕಾನೂನುಗಳನ್ನು ರೈತರ ಅನುಕೂಲಕ್ಕಾಗಿ ತರಲಾಗಿದೆ ಆದರೆ ಜನರ ಹಿತಾಸಕ್ತಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ತಾವು ಸದಾ ರೈತರ ಹಿತಕ್ಕಾಗಿ ದುಡಿದಿದ್ದು, ಅವರ ಬೆಂಬಲವೂ ಸದಾ ಇದೆ ಎಂದು ತಿಳಿಸಿದರು.
ಬಿಜೆಪಿ ಗೆದ್ದಾಗಲೆಲ್ಲಾ ಅದು ತಳ ಮಟ್ಟಕ್ಕೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತದೆ ಮತ್ತು ಜನರ ವಿಶ್ವಾಸವನ್ನು ಗೆಲ್ಲುವಲ್ಲಿ ಯಾವುದೇ ಅವಕಾಶ ಇದೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಬಿಜೆಪಿಗೆ ಚುನಾವಣೆಗಳು ಮುಕ್ತ ವಿಶ್ವವಿದ್ಯಾನಿಲಯಗಳಿದ್ದಂತೆ ಹೊಸ ನೇಮಕಾತಿಗಳಿಗೆ ಅವಕಾಶವಿದೆ ಎಂದರು.
ಸರ್ಕಾರ ವ್ಯಾಪಾರದಲ್ಲಿ ಇರಬಾರದು ಮತ್ತು ಸರ್ಕಾರದ ನೀತಿಗಳು ಜನರಿಗೆ ಅವಕಾಶಗಳನ್ನು ನೀಡುವತ್ತ ಗಮನಹರಿಸಿರಬೇಕು. ಬಡವರಿಗೆ ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯ ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ ಎಂದರು. ಕುಟುಂಬ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಎಂದು ಮೋದಿ ಹೇಳಿದ್ದಾರೆ. ರಾಜಕೀಯ ಪಕ್ಷಗಳ ಪ್ರಜಾಪ್ರಭುತ್ವೀಕರಣವು ಬಹಳ ಮುಖ್ಯ ಎಂದು ಪ್ರಧಾನಿ ಒತ್ತಿ ಹೇಳಿದರು.
ಕಾಂಗ್ರೆಸ್ ಬಗ್ಗೆ ಕೇಳಿದಾಗ, ಕಾಂಗ್ರೆಸ್ನ ಕಾರ್ಯಶೈಲಿ ಮತ್ತು ಸಿದ್ಧಾಂತದ ಆಧಾರವೆಂದರೆ ಕೋಮುವಾದ, ಜಾತಿವಾದ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರ ಎಂದು ಮೋದಿ ಆರೋಪಿಸಿದರು. ಈ ಸಿದ್ಧಾಂತ ದೇಶದ ಮುಖ್ಯವಾಹಿನಿಯಲ್ಲಿ ಉಳಿದರೆ ದೇಶಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಜನರು ಹೊರಗೆ ಹೋಗದಂತೆ ಡಬ್ಲ್ಯುಎಚ್ಒ ಸೂಚಿಸಿತ್ತು. ಆದರೆ ಕಾಂಗ್ರೆಸ್ ಪಕ್ಷವು ಉಚಿತ ರೈಲು ಟಿಕೆಟ್ ನೀಡುವ ಮೂಲಕ ಜನರನ್ನು ಹೊರಗೆ ಹೋಗಲು ಪ್ರೋತ್ಸಾಹಿಸಿತು ಎಂದಿದ್ದಾರೆ.
ಪಂಜಾಬ್ ಚುನಾವಣೆಯ ಕುರಿತು ಮಾತನಾಡಿದ ಮೋದಿ ಅವರು, ರಾಜ್ಯದಲ್ಲಿ ಬಿಜೆಪಿ ಅತ್ಯಂತ ವಿಶ್ವಾಸಾರ್ಹ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಹಿರಿಯರು ಮತ್ತು ರಾಜಕೀಯದಲ್ಲಿ ಉನ್ನತ ನಾಯಕರು ತಮ್ಮ ಹಳೆಯ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದಾರೆ ಎಂದು ಹೇಳಿದರು.