ಅಂಕೋಲಾ : ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢ ಶಾಲೆಗೆ ಬಿಎಸ್ಎನ್ಎಲ್ ಉಪ ವಿಭಾಗೀಯ ನಿವೃತ್ತ ಅಭಿಯಂತರ ಮಹಾದೇವ ಬಿ. ನಾಯ್ಕ ಅವರು ಲಯನ್ಸ್ ಕ್ಲಬ್ ಮೂಲಕ ನೀಡಿದ ಡಯಾಸನ್ನು ಮಂಗಳವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಅಧ್ಯಕ್ಷ ಡಾ. ಕರುಣಾಕರ ಎಂ.ಎನ್. ಪ್ರತಿಯೊಬ್ಬರೂ ಸಮಾಜವನ್ನು ಸಮಾನತೆಯಿಂದ ನೋಡುವ ಗುಣವಿದ್ದರೆ ಯಾವುದೇ ಬೇಧ-ಭಾವವಿಲ್ಲದೆ ದೇಶ ಶಕ್ತಿಯುತವಾಗುತ್ತದೆ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವುದೇ ನಿಜವಾದ ಮಾನವೀಯತೆ. ನಮ್ಮ ಕ್ಲಬ್ನಿಂದ ಸಾಕಷ್ಟು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಖ್ಯಾಧ್ಯಾಪಕ ಎಂ.ಡಿ. ನಾಯ್ಕ ಮಾತನಾಡಿ ನಮ್ಮ ಶಾಲೆಗೆ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ದಾನಿಗಳಿಂದ ನೀಡುವ ಸಹಾಯವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಇನ್ನು ಮುಂದೆಯೂ ಕೂಡ ದಾನಿಗಳು ನಮ್ಮ ಶಾಲೆಗೆ ವಿವಿಧ ಉಪಕರಣ ನೀಡುವಂತಾಗಲಿ ಎಂದರು.
ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸತೀಶ ಈರು ನಾಯ್ಕ, ಲಯನ್ಸ್ ಕ್ಲಬ್ನ ಎಸ್.ಆರ್. ಉಡುಪಿ, ಶಂಕರ ಹುಲಸ್ವಾರ, ಗಣಪತಿ ನಾಯಕ, ಸಂತೋಷ ಸಾಮಂತ, ಚೈನ್ ಸಿಂಗ್, ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷ ಶ್ರೀಪಾದ ಟಿ. ನಾಯ್ಕ, ಪತ್ರಕರ್ತ ನಾಗರಾಜ ಮಂಜಗುಣಿ ಇತರರಿದ್ದರು. ಶಿಕ್ಷಕ ಚಂದ್ರಕಾಂತ ಲಮಾಣಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ನ ಝೋನ್ ಚೇರ್ಪರ್ಸನ್ ಮಹಾಂತೇಶ ರೇವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಹಸನ್ ಶೇಖ್ ನಿರ್ವಹಿಸಿದರು. ಶಿಕ್ಷಕ ಚಂದ್ರಶೇಖರ ನಾಯ್ಕ ವಂದಿಸಿದರು. ಇದೇ ಸಂದರ್ಭದಲ್ಲಿ ಡಯಾಸ್ ಕೊಡುಗೆ ನೀಡಿದ ಮಹಾದೇವ ಬಿ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.