ಶಿರಸಿ: ತಾಲೂಕಿನ ಹೊಸಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಇಕೊ ಸಂಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಹಿಂದಿರುವ ಅರಣ್ಯ ಹಾಗೂ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಸುಮಾರು 26 ಜಾತಿಯ ಗಿಡಮರ ಬಳ್ಳಿಗಳನ್ನು ಪರಿಚಯಿಸಿ ಅವುಗಳಿಂದ ಆಗುವ ಪ್ರಯೋಜನ, ಔಷಧೀಯ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಬೋರ್ಕರ್, ಇಕೊ ಕ್ಲಬ್ನ ಮಾರ್ಗದರ್ಶಕಿ, ಶಿಕ್ಷಕಿ ಸಹನಾ ಆಚಾರಿ, ಶಿಕ್ಷಕರಾದ ವಸಂತ ನಾಯ್ಕ ನಿಸಾರ್ ಅಹ್ಮದ್ ಅವರ ನೇತೃತ್ವದ ತಂಡದಲ್ಲಿ ನಾಲ್ಕರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿದ್ದರು.
ನಂತರ ವಿರೂಪಾಕ್ಷ ಬನವಾಸಿ ಎಂಬುವರ ಅನಾನಸ್ ಮತ್ತು ಅಡಿಕೆ ತೋಟಕ್ಕೆ ತೆರಳಿ ವಾಣಿಜ್ಯ ಬೆಳೆಗಳಾದ ಅನಾನಸ್ ಮತ್ತು ಅಡಿಕೆ ಸಸಿಯಿಂದ ಹಿಡಿದು ಮರವಾಗಿ ಬೆಳೆಸುವಲ್ಲಿ ಏನೇನು ಮಾಡಬೇಕು ಎಂಬುದರ ಬಗ್ಗೆ ರೈತ ವಿರೂಪಾಕ್ಷಪ್ಪ ಅವರಿಂದ ಮಾಹಿತಿ ಪಡೆಯಲಾಯಿತು.