ಸಿದ್ಧಾಪುರ: ರಾಜ್ಯ ಸರಕಾರವು ಶಿವಮೊಗ್ಗ ಶರಾವತಿ ವನ್ಯ ಜೀವಿ ಅಭಯಾರಣ್ಯಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿರುವುದರಿಂದ ಜಿಲ್ಲೆಯ ಜನವಸತಿಯ ಜನಜೀವನಕ್ಕೆ ಗಂಭೀರ ಸ್ವರೂಪದ ಅನಾನುಕೂಲವಾಗಿರುವುದರಿಂದ ಅಭಯಾರಣ್ಯ ಪ್ರದೇಶ ಉತ್ತರ ಕನ್ನಡಕ್ಕೂ ವಿಸ್ತರಿಸಿರುವುದನ್ನು ಅರಣ್ಯವಾಸಿಗಳು ಡಿ.22ಕ್ಕೆ ಬೆಳಗಾಂವ ಚಲೋ ಕಾರ್ಯಕ್ರಮದಲ್ಲಿ ವಿರೋಧ ವಕ್ತಪಡಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರ ಅಭಿಪ್ರಾಯ ಸಂಗ್ರಹಿಸದೇ, ಅಭಯಾರಣ್ಯ ವಿಸ್ತರಣೆ ಕುರಿತು ಜನಜಾಗೃತಿ ಮೂಡಿಸದೇ, ಅರಣ್ಯ ವ್ಯಾಪ್ತಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗಲೇ ಸದ್ರಿ ಅಧಿಸೂಚನೆಯಿಂದ ಸದ್ರಿ ಪ್ರದೇಶದ ಅರಣ್ಯ ಸಾಗುವಳಿದಾರರ ಹಕ್ಕು ಕುಂಟಿತವಾಗುವ ಹಿನ್ನೆಲೆಯಲ್ಲಿ, ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಸದ್ರಿ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸ್ವತಂತ್ರತೆ ಮತ್ತು ಸ್ವಾವಲಂಬನೆ ಜೀವನಕ್ಕೆ ಆತಂಕ ಉಂಟಾಗುವುದರಿಂದ, ಸಂಪೂರ್ಣವಾಗಿ ಸದ್ರಿ ಪ್ರದೇಶ ಮಾನವನ ಸ್ವತಂತ್ರ ಜೀವನಕ್ಕೆ ದಿಗ್ಭಂದನೆ ಹಾಗೂ ಮೂಲಭೂತ ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗುವುದಲ್ಲದೇ ಮಾನವ ಹಕ್ಕು ಪಡೆಯಲು ಸದ್ರಿ ಯೋಜನೆ ಮಾರಕವಾಗಿರುವುದರಿಂದ ಅಭಯಾರಣ್ಯ ಪ್ರದೇಶ ವಿಸ್ತರಣೆಗೆ ವಿರೋಧಿಸಲಾಗುವುದೆಂದು ಹೇಳಿದರು.
ಆದೇಶ ರದ್ದತಿಗೆ ಆಗ್ರಹ: ಸರಕಾರದ ಜನವಿರೋಧ ನೀತಿಯಾದ ಅಭಯಾರಣ್ಯ ವಿಸ್ತರಿಸಿದ ಆದೇಶವನ್ನು ರದ್ದುಪಡಿಸಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶವನ್ನು ರದ್ದುಗೊಳಿಸಿ ಅರಣ್ಯವಾಸಿ ಮತ್ತು ಜನಸಾಮಾನ್ಯರಿಗೆ ಮೂಲಭೂತ ಹಕ್ಕಿನಿಂದ ವಂಚಿತರಾದ ರಿತಿಯಲ್ಲಿ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಲಾಗುವುದೆಂದು ರವೀಂದ್ರ ನಾಯ್ಕ ಹೇಳಿದರು.