ಶಿರಸಿ: ನಗರದ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕೆ ಹೊಸತನ ಅಳವಡಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ಲೈಬ್ರರಿಯನ್ನು ಡಿಜಿಟಲೀಕರಣಗೊಳಿಸಿದ್ದು, ವಿದ್ಯಾರ್ಜನೆಗೆ ಅಗತ್ಯವಾದ ಪುಸ್ತಕಗಳು ವಿದ್ಯಾರ್ಥಿಗಳ ಮೊಬೈಲ್ನಲ್ಲಿಯೇ ಇನ್ನು ಸಿಗಲಿದೆ ಎಂದು ಕಾಲೇಜಿನ ಪಾಚಾರ್ಯೆ ಡಾ. ಕೋಮಲಾ ಭಟ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವಿಕೆ ಕಡಿಮೆ ಆಗುತ್ತಿದೆ. ಕಾಲೇಜಿನ ಲೈಬ್ರರಿಯಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ 80 ಸಾವಿರ ಪುಸ್ತಕಗಳಿದ್ದರೂ ವಿದ್ಯಾರ್ಥಿಗಳು ಬಳಸಿಕೊಳ್ಳುವ ಪ್ರಮಾಣ ಕ್ಷೀಣಿಸಿದೆ. ಆಧುನಿಕತೆಯ ಈ ದಿನಗಳಲ್ಲಿ ಕಾಲೇಜಿನ ಲೈಬ್ರರಿಯಲ್ಲಿ ಓದುವ ಬದಲು ಮೊಬೈಲ್ ಮೂಲಕ ಓದುವಿಕೆಗೇ ವಿದ್ಯಾರ್ಥಿಗಳು ಆಸಕ್ತರಾಗಿದ್ದಾರೆ. ಹೀಗಾಗಿ, ಪ್ರತ್ಯೇಕ ವೆಬ್ ಸೈಟ್ ಒಂದನ್ನು ರೂಪಿಸಲಾಗಿದ್ದು, ಕಾಲೇಜಿನ 737 ವಿದ್ಯಾರ್ಥಿಗಳಿಗೆ ಈ ವೆಬ್ ನ ಲಾಗಿನ್ ಐಡಿ ನೀಡಲಾಗುತ್ತಿದೆ. ದಿನದ 24 ಗಂಟೆಯೂ ಮೊಬೈಲ್ ಮೂಲಕ ಅವರು ಯಾವುದೇ ಪುಸ್ತಕವನ್ನು ಓದಬಹುದಾಗಿದೆ ಎಂದರು.
ಕೊವಿಡ್ ಸನ್ನಿವೇಶದಲ್ಲಿ ಲೈಬ್ರರಿಯ ಡಿಜಿಟಲೀಕರಣ ಕಲ್ಪನೆ ಹುಟ್ಟಿಕೊಂಡಿದೆ. ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ತರಗತಿಗಳು ನಡೆಯುತ್ತಿದ್ದವಾದರೂ ಅದಕ್ಕೆ ಪೂರಕ ಅಧ್ಯಯನ ನಡೆಸಲು ಪುಸ್ತಕಗಳನ್ನು ಓದಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಒಬ್ಬರು ಒಂದು ಪುಸ್ತಕ ಒಯ್ದರೆ ಅವರು ವಾಪಸ್ ಮಾಡುವವರೆಗೂ ಬೇರೆಯವರಿಗೆ ಅಧ್ಯಯನಕ್ಕೆ ಲಭಿಸುತ್ತಿರಲಿಲ್ಲ. ಲೈಬ್ರರಿ ಡಿಜಿಡಲೀಕರಣದಿಂದಾಗಿ ಒಂದೇ ಪುಸ್ತಕವನ್ನು ಹಲವು ವಿದ್ಯಾರ್ಥಿಗಳು ಏಕ ಕಾಲದಲ್ಲಿ ಓದಬಹುದಾಗಿದೆ. ಇಲ್ಲಿಯೇ ಬಂದು ಪುಸ್ತಕ ಒಯ್ಯಬೇಕು ಎಂಬ ನಿಬರ್ಂಧ ಇರುವುದಿಲ್ಲ. ಅಲ್ಲದೇ, ಗ್ರಂಥಾಲಯದಲ್ಲಿ ಈಗ ಇರುವ ಪುಸ್ತಕಗಳಿಗಿಂತಲೂ ಹೆಚ್ಚು ಪುಸ್ತಕಗಳು ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯವಾಗುತ್ತಿವೆ. ಇದರ ಜೊತೆ ಗೂಗಲ್ ಪುಸ್ತಕಗಳು, ಇಂಟರ್ ನೆಟ್ ಪುಸ್ತಕಗಳು, ಆಡಿಯೋ ಪುಸ್ತಕಗಳನ್ನೂ ಸಹ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದರು.
ಮುಂದಿನ ಹಂತದಲ್ಲಿ ಮ್ಯೂಸಿಕಲ್ ಅಧ್ಯಯನ ಕೊಠಡಿ, ಐಎಎಸ್, ಕೆ ಎ ಎಸ್ ಶಿಕ್ಷಣಕ್ಕೆ ಅನುಮಾಗುವ ಮಾದರಿ ಲೈಬ್ರರಿ, ಬೇರೆ ಬೇರೆ ಭಾಷೆಗಳಲ್ಲಿಯೂ ಕಲಿಯುವ ವ್ಯವಸ್ಥೆ ಕಲ್ಪಿಸುವ ಉದ್ದೆಶವಿದೆ ಎಂದರು.
ಲೈಬ್ರರಿಯನ್ ಶಾರದಾ ಭಟ್, ಗಣೇಶ ಹೆಗಡೆ, ರಾಘವೇಂದ್ರ ಜಾಜಿಗುಡ್ಡೆ ಇತರರಿದ್ದರು.
ಡಿ.18 ಕ್ಕೆ ಉದ್ಘಾಟನೆ: ಆನ್ ಲೈನ್ ಡಿಜಿಟಲ್ ಲೈಬ್ರರಿಯ ಉದ್ಘಾಟನಾ ಸಮಾರಂಭ ಡಿ.18ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಕುಮಟಾ ಡಾ.ಎ.ವಿ.ಬಾಳಿಗಾ ಕಾಲೇಜಿನ ಮುಖ್ಯ ಗ್ರಂಥಪಾಲ ಶಿವಾನಂದ ಬುಳ್ಳಾ, ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ ಇತರರು ಪಾಲ್ಗೊಳ್ಳುತ್ತಿದ್ದಾರೆ.