ಶಿರಸಿ: ತನ್ನೆದುರು ಕುಳಿತ ವ್ಯಕ್ತಿಯ ಯತಾವತ್ ಚಿತ್ರ ಬಿಡಿಸುವ ಮೂಲಕ ಕುಂಚಗಳ ಮೋಡಿ ಮಾಡುವ ಪ್ರತಿಭೆಯೊಂದು ತೆರೆಮರೆಯಲ್ಲಿಯೇ ಸಾಧನೆಯ ಶಿಖರವೇರುತ್ತಿದೆ. ಜಿಲ್ಲೆಯ ಶಿರಸಿ ತಾಲೂಕಿನ ಈ ಯುವ ಪ್ರತಿಭೆ ಚಿಕ್ಕವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿ ಕುಂಚಗಳ ಮೂಲಕ ಚಿತ್ತಾರಗಳ ಮೋಡಿ ಮಾಡಿ ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡು ಸಾಧನೆ ಮಾಡಿದೆ.
ಶಿರಸಿಯ ಬಲವಳ್ಳಿ ಗ್ರಾಮದ ಕಬ್ಬಿನಮನೆಯ ಕೃಷಿಕ ದಂಪತಿಯ ಪುತ್ರರಾದ ಸುಬ್ರಮಣ್ಯ ಹೆಗಡೆ ಈ ಯುವಪ್ರತಿಭೆ. ಕಲೆಯನ್ನು ಸ್ವ ಆಸಕ್ತಿಯಿಂದ ಒಲಿಸಿಕೊಂಡಿರುವ ಇವರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ಬರೆದು ರಾಜ್ಯ ಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಸಾಧನೆ ಮಾಡಿದ್ದಾರೆ.
ಪೆನ್ಸಿಲ್, ಬಣ್ಣ ಯಾವುದಾದರೂ ಸರಿ ಅಂದವಾಗಿ ಚಿತ್ರ ಬಿಡಿಸುತ್ತಾರೆ. ತಬಲಾ ವಾದನದಲ್ಲಿಯೂ ಪಳಗಿದ ಇವರು ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ.
ವಂಶಪಾರಂಪರ್ಯವಾಗಿ ಮನೆಯಲ್ಲಿ ಚಿತ್ರಕಲಾವಿದರಿದ್ದರು ಅವರಿಂದಲೇ ಈ ಕಲೆ ಒಲಿದಿದೆ ಎನ್ನುತ್ತಾರೆ ಸುಬ್ರಮಣ್ಯ ಹೆಗಡೆ. ಯಾವುದೇ ತರಬೇತಿ ಪಡೆಯದೆ ನಿರಂತರ ಪ್ರಯತ್ನದಿಂದ ತಮ್ಮ ಐದನೇ ವರ್ಷದಿಂದ ಚಿತ್ರ ಬಿಡಿಸತೊಡಗಿ ಈಗ ಅದೇ ಕಲೆಯಲ್ಲಿ ಪಳಗಿ ಅಧ್ಭುತವಾದ ಚಿತ್ರ ಸೃಷ್ಟಿಸುವ ಕಲೆಗಾರರಾಗಿ ಹೊರಹೊಮ್ಮಿದ್ದಾರೆ.
ಇವರು ವಿಷಯ ವಸ್ತುವಾಗಿ ನಿಸರ್ಗ, ಭಾವಚಿತ್ರ, ಕಾರ್ಟೂನ್ ಮತ್ತು ವಾಹನಗಳಗಳನ್ನು ಹೆಚ್ಚಾಗಿ ಚಿತ್ರಿಸುತ್ತಾರೆ.
ಇವರು ಪೆನ್ಸಿಲ್ ಚಿತ್ರ, ತೈಲ ವರ್ಣ, ವರ್ಲಿ ಕಲೆ, ಜಲವರ್ಣ , ಅಕ್ರಾಲಿಕ್, ಚಾರ್ಕೊಲ್ ( ಮಸಿ) ಮತ್ತು ತ್ರೀಡಿ ಚಿತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಹಾಗೇಯೆ ವೈಜ್ಞಾನಿಕ ಮಾದರಿಗಳನ್ನು ತಯಾರಿಸುವ ಹವ್ಯಾಸವೂ ಅವರಿಗಿದ್ದು ಇವರು ತಯಾರಿಸಿದ ಸಿರಿಂಜ್ ಜೆ.ಸಿ.ಬಿ ಗೆ ಪ್ರಶಸ್ತಿ ಲಭಿಸಿದೆ.
ಇವರು ಬಿಡಿಸಿದ ತ್ರೀಡಿ ಚಿತ್ರಗಳನ್ನು ನೋಡಿದವರು ಅದು ನಿಜವಾದ ವಸ್ತು ಎಂದು ಮೋಸಹೊಗುತ್ತಾರೆ. ಅಷ್ಟು ನೈಜವಾದ ಚಿತ್ರವನ್ನು ಇವರು ತಮ್ಮ ಕುಂಚದಲ್ಲಿ ಮೂಡಿಸುತ್ತಾರೆ.
ಕತ್ತರಿ, ಬಾಟಲ್, ಪ್ಲಾಸ್ಟಿಕ್ ನ ತಿಂಡಿ ಪೊಟ್ಟಣ ಮತ್ತು ಹಲವು ಕಾರುಗಳ ಹೊಸ ವಿನ್ಯಾಸದ ಚಿತ್ರಗಳು ವಿಶೇಷವಾಗಿದೆ.
ಇವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ನಲವತ್ತಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಸಾಧನೆ ಮಾಡಿದ್ದಾರೆ.
ಕ್ವಿಜ್ ಮತ್ತು ವಿಜ್ಞಾನಮಾದರಿಗಳೂ ಇದರಲ್ಲಿ ಸೇರಿಕೊಂಡಿದೆ.
ತಿರುಪತಿಯ ರಾಷ್ರ್ಟಮಟ್ಟದ ಚಿತ್ರೋತ್ಸವಕ್ಕೆ ಅಹ್ವಾನಿತರಾಗಿದ್ದರು. ಕಾರವಾರ, ಧಾರವಾಡದ, ಹೊನ್ನಾವರದಲ್ಲಿ ನಡೆದ ಯುವಜನ ಮೇಳದಲ್ಲಿ ಸತತವಾಗಿ ಮೂರು ವರ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇಳಿವಯಸ್ಸಿನಲ್ಲೇ ಇಂತಹ ಸಾಧನೆಗಳನ್ನು ಕರಗತವಾಗಿಸಿಕೊಂಡು ತನ್ಮೂಲಕ ಜಿಲ್ಲೆಯ ಯುವಜನತೆಗೆ ಮಾದರಿಯಾಗಿರುವ ಸುಬ್ರಮಣ್ಯ ಹೆಗಡೆಯವರಂತಹ ಕಲಾವಿದರು ಮತ್ತಷ್ಟು ಹೆಚ್ಚು ಸಾಧನೆ ಮಾಡುವಂತಾಗಲಿ ಎಂಬುದು ಎಂದಿನ ಆಶಯ.
-ಸುಮಾ.ಕಂಚೀಪಾಲ್