ಜೈಪುರ: ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತದಿಂದ ಹಸುವಿನ ಸಗಣಿ ಕುವೈತ್ ಗೆ ರಫ್ತಾಗಲಿದ್ದು, ಅದೂ ಕೂಡ 192 ಮೆಟ್ರಿಕ್ ಟನ್ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತಾಗಲಿದೆ ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ.
ಗೋವುಗಳ ರಕ್ಷಣೆಗಾಗಿ ನಮ್ಮ ತಂಡ ನಡೆಸಿದ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದಿರುವ ಗುಪ್ತಾ ಅವರು, ಜೈಪುರ ಮೂಲದ ಸನ್ರೈಸ್ ಅಗ್ರಿಲ್ಯಾಂಡ್ ಆಂಡ್ ಡೆವಲಪ್ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕುವೈಟ್ನಿಂದ ಈ ಆದೇಶ ಬಂದಿದೆ.
ಮುಸ್ಲಿಂ ಬಾಹುಳ್ಯದ ಕುವೈಟ್ ಭಾರತದಿಂದ ದೇಶಿ ಹಸುಗಳ ಸಗಣಿ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳಿದ್ದಾರೆ. ಜೈಪುರದ ಟೋಂಕ್ ರಸ್ತೆಯ ಶ್ರೀಪಿಂಜ್ರಾಪೋಲ್ ಗೌಶಾಲಾದಲ್ಲಿರುವ ಸನ್ರೈಸ್ ಆರ್ಗಾನಿಕ್ ಪಾರ್ಕ್ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡುವ ಕೆಲಸ ನಡೆಯುತ್ತಿದೆ. ಇದರ ಮೊದಲ ರವಾನೆಯಾಗಿ ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ರವಾನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
2020-21ರಲ್ಲಿ ಭಾರತದಿಂದ ಪ್ರಾಣಿ ಉತ್ಪನ್ನಗಳ ರಫ್ತು 27,155.56 ಕೋಟಿ ರೂಪಾಯಿಗಳಾಗಿದೆ ಎಂದು ಅತುಲ್ ಗುಪ್ತಾ ಹೇಳಿದರು. ಇದಲ್ಲದೇ ಸಾವಯವ ಗೊಬ್ಬರದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ದೇಶೀಯ ಹಸುವಿನ ಸಗಣಿ ಸಂಶೋಧನೆಯ ನಂತರ ಅನೇಕ ದೇಶಗಳು ಅದರ ಮಹತ್ವ ಕಂಡುಕೊಂಡಿವೆ, ಇದು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಅದರಿಂದ ಉತ್ಪತ್ತಿಯಾಗುವ ಉತ್ಪನ್ನಗಳ ಬಳಕೆಯು ಗಂಭೀರ ಕಾಯಿಲೆಗಳಿಂದ ಮನುಷ್ಯರನ್ನು ಮುಕ್ತಗೊಳಿಸುತ್ತದೆ. ಇದೇ ಕಾರಣಕ್ಕೆ ಹಲವು ದೇಶಗಳು ಭಾರತದಿಂದ ಸಾವಯವ ಗೊಬ್ಬರದ ಜೊತೆಗೆ ದೇಶಿ ಗೋಮಯವನ್ನು ಆಮದು ಮಾಡಿಕೊಳ್ಳಲು ಆರಂಭಿಸಿವೆ.
ಖರ್ಜೂರದ ಬೆಳೆಗೆ ಪೌಡರ್ ರೂಪದಲ್ಲಿ ದೇಶಿ ಗೋಮಯವನ್ನು ಬಳಸುವುದರಿಂದ ಹಣ್ಣಿನ ಗಾತ್ರದಲ್ಲಿ ಹೆಚ್ಚಳ ಹಾಗೂ ಉತ್ಪಾದನೆಯಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬಂದಿರುವುದನ್ನು ಕುವೈಟ್ ಕೃಷಿ ವಿಜ್ಞಾನಿಗಳು ವ್ಯಾಪಕ ಸಂಶೋಧನೆಯ ನಂತರ ಕಂಡುಕೊಂಡಿದ್ದಾರೆ ಎಂದರು. ಈ ಕಾರಣಕ್ಕಾಗಿಯೇ ಕುವೈಟ್ ಮೂಲದ ಕಂಪನಿ ಲಾಮೋರ್ ಜೈಪುರ ಸಂಸ್ಥೆಯಿಂದ 192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ.
ಕೃಪೆ: https://news13.in/