ಭೋಃ ಪಾಂಥ ಪುಸ್ತಕಧರ ಕ್ಷಣಮತ್ರ ತಿಷ್ಠ
ವೈದ್ಯೋsಸಿ ಕಿಂ ಗಣಿತಶಾಸ್ತ್ರವಿಶಾರದೋsಸಿ |
ಕೇನೌಷಧೇನ ಮಮ ಪಶ್ಯತಿ ಭರ್ತುರಂಬಾ
ಕಿಂವಾsಗಮಿಷ್ಯತಿ ಪತಿಃ ಸುಚಿರಪ್ರವಾಸೀ ||
ಮನೆಯೊಂದರ ಹೊಸಿಲಿನ ಹೊರಗೆ ನಿಂತ ವಿವಾಹಿತೆ ತರುಣಿಯೊಬ್ಬಳು ದಾರಿಹೋಕನನ್ನು ಕುರಿತು ಕೇಳುತ್ತಾಳೆ.
’ಎಲೈ ದಾರಿಹೋಕನೇ, ಪುಸ್ತಕಧಾರಿಯೇ, ನೀನೇನು ವೈದ್ಯನೋ ಅಥವಾ ಗಣಿತಶಾಸ್ತ್ರವಿದನೋ? ನೀನು ವೈದ್ಯನಾದರೆ ಹೇಳಪ್ಪಾ, ಯಾವ ಔಷಧಧಿಂದಾಗಿ ನನ್ನ ಅತ್ತೆಯ ಕಣ್ಣುಗಳು ಮತ್ತೆ ಮೊದಲಿನಂತಾಗುತ್ತವೆ, ನೋಡಲು ಶಕ್ತವಾಗುತ್ತವೆ? ಅಥವಾ ನೀನು ಗಣಿತಜ್ಞನಾದರೆ ಹೇಳು, ದೂರದೂರಿನ ಪ್ರವಾಸದಲ್ಲಿರುವ ನನ್ನ ಪತಿಯು ಯಾವತ್ತಿಗೆ ಮರಳುತ್ತಾನೆ?”
ಮೇಲ್ನೋಟಕ್ಕೆ ತನ್ನ ಗಂಡನ ತಾಯಿಯ ಕುರಿತು ಮತ್ತು ತನ್ನ ಗಂಡನ ಕುರಿತು ಹೆಣ್ಮಗಳ ಕಾಳಜಿಯಂತೆ ಈ ಶ್ಲೋಕವು ಕಾಣುತ್ತಿದ್ದರೂ ಇದರ ಅಂತರಾರ್ಥ ಬೇರೆಯೇ ಇದೆ ಎಂಬುದು ಸುಭಾಷಿತಕಾರನ ಇಂಗಿತ. ಮನೆಯಲ್ಲಿ ನಾನೊಬ್ಬಳೇ ಇರುವುದು, ಗಂಡ ದೂರದೂರಿನ ಪ್ರಯಾಣಕ್ಕೆ ಹೋಗಿದ್ದಾನೆ, ಅತ್ತೆಗೆ ಕಣ್ಣು ಕಾಣಿಸದು, ಹಾಗಾಗಿ ಓ ದಾರಿಹೋಕನೇ …. ಎಂಬ ಆಹ್ವಾನವನ್ನವಳು ಕೊಡುತ್ತಿದ್ದಾಳಂತೆ. ಇವೆಲ್ಲ ಅಶಿಷ್ಟವ್ಯವಹಾರದಂತೆ ಕಂಡರೂ ಮಾನವ ಸ್ವಭಾವದ ವಿವರಣೆಯಾದ್ದರಿಂದ ಸ್ವೀಕಾರ್ಯ. ಅದಕ್ಕಾಗಿಯೇ ಸುಭಾಷಿತರತ್ನಭಾಂಡಾಗಾರದಲ್ಲಿ ಈ ಬಗೆಯ ಶ್ಲೋಕಗಳಿಗೆಂದೇ ಭಾಗವೊಂದು ಮೀಸಲಾಗಿದೆ.
– ಶ್ರೀ ನವೀನ ಗಂಗೋತ್ರಿ