ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕರಕುಶಲ ಮತ್ತು ಕಲೆಗಳಿಗೆ ಪ್ರಮುಖ ಮನ್ನಣೆ ದೊರೆತಿದ್ದು, ಶ್ರೀನಗರವು ಕರಕುಶಲ ಮತ್ತು ಜಾನಪದ ಕಲೆಗಳ ವಿಭಾಗದ ಅಡಿಯಲ್ಲಿ UNESCO ಸೃಜನಶೀಲ ನಗರಗಳ ಜಾಲ (ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್) 2021 ಗೆ ಸೇರಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುಂದರವಾದ ಶ್ರೀನಗರವು ತನ್ನ ಕರಕುಶಲ ಮತ್ತು ಜಾನಪದ ಕಲೆಗಾಗಿ ವಿಶೇಷ ಉಲ್ಲೇಖದೊಂದಿಗೆ ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್ಗೆ ಸೇರ್ಪಡೆಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮೋದಿ ಟ್ವೀಟ್ನಲ್ಲಿ ಹೇಳಿದ್ದಾರೆ. ಶ್ರೀನಗರದ ಅಮೋಘ ಸಾಂಸ್ಕೃತಿಕ ನೀತಿಗೆ ಇದು ಸೂಕ್ತ ಮನ್ನಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಜನರನ್ನು ಅಭಿನಂದಿಸಿರುವ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ನಿರ್ಧಾರವು ಕೇಂದ್ರಾಡಳಿತ ಪ್ರದೇಶದ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಅತ್ಯುತ್ತಮ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ. ಶ್ರೀನಗರ ಮೇಯರ್ ಜುನೈದ್ ಮಟ್ಟು ಮತ್ತು ಶ್ರೀನಗರ ಮಹಾನಗರ ಪಾಲಿಕೆಯ ಆಯುಕ್ತ ಅಥರ್ ಅಮೀರ್ ಖಾನ್ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ತಂಡಕ್ಕೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಧಾನಿ ಮೋದಿಯವರು ಸದಾ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.
ನ್ಯೂಸ್ 13