ಶಿರಸಿ: ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆಯಲಿರುವ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶೀಗೆಹಳ್ಳಿಯ ಚೈತ್ರಾ ನಾರಾಯಣ ಹೆಗಡೆ ಜಿಲ್ಲೆಯ ಹೆಮ್ಮೆ.
ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಅವರಿಗೆ ಇಲ್ಲಿನ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಪದಕ ಪ್ರದಾನ ಮಾಡಲಿದ್ದಾರೆ. ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಅವರಿಗೆ ಮೆಡಿಸಿನ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡುವ ಆಸಕ್ತಿ ಎಂದು ಚೈತ್ರಾ ಹೇಳಿದ್ದಾರೆ.
ಈ ಬಾರಿ ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ಶ್ರೇಯ ನನ್ನದಾಗಿದ್ದು, ಅಪ್ಪ ನಾರಾಯಣ ಹೆಗಡೆ ಹಾಗೂ ಅಮ್ಮ ಸುಮಂಗಳಾ ಹೆಗಡೆ ಅವರಿಗೆ ಈ ಎಲ್ಲ ಪದಕಗಳು ಸಮರ್ಪಿತ. ಅವರು ಯಾವತ್ತೂ ನನ್ನ ಮೇಲೆ ಒತ್ತಡ ಹಾಕಲಿಲ್ಲ. ಬದಲಾಗಿ ನಾನು ಇಷ್ಟಪಟ್ಟ ವಿಷಯ ಆಯ್ಕೆ ಮಾಡಿಕೊಂಡು ಓದಲು ಅವಕಾಶ ಮಾಡಿಕೊಟ್ಟರು. ಬೋಧಕರಿಗೂ ಧನ್ಯವಾದ ಅರ್ಪಿಸುವೆ ಎಂದು ಚೈತ್ರಾ ಹೇಳಿದರು.
ಶಿರಸಿಯ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಓದಿದೆ. ಊರು ಶೀಗೆಹಳ್ಳಿ. ಅಲ್ಲಿಗೆ ಬೆಳಿಗ್ಗೆ- ಸಂಜೆ ಮಾತ್ರ ಬಸ್. ಅದು ತಪ್ಪಿದರೆ ಪೆÇೀಷಕರೇ ಕರೆದುಕೊಂಡು ಹೋಗಬೇಕಿತ್ತು. ಈಗಲೂ ಈ ಪರಿಸ್ಥಿತಿ ಸುಧಾರಿಸಿಲ್ಲ. ಬಳಿಕ ಮೈಸೂರಿಗೆ ಬಂದು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದೆ ಎಂದರು.