ಮೈಸೂರು: ಇತ್ತೀಚೆಗೆ ನಿಧನರಾಗಿರುವ ನಟ ಪುನೀತ್ ರಾಜ್ ಕುಮಾರ್ ‘ಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯ ಘೋಷಣೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುಲಪತಿ ಪ್ರೊಫೆಸರ್ ಹೇಮಂತ್ ಕುಮಾರ್ ಅವರು ಮಾ.22ರಂದು ವಿಶ್ವವಿದ್ಯಾಲಯದ ಕ್ರಾಫರ್ಡ್ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ. ಪುನೀತ್ ಅವರಿಗೆ ನೀಡಲಾಗುವ ಗೌರವ ಡಾಕ್ಟರೇಟ್ ಸ್ವೀಕರಿಸಲು ಅವರ ಪತ್ನಿ ಅಶ್ವಿನಿ ಸಮ್ಮತಿಸಿದ್ದಾರೆ ಎಂದರು.
ಹಿರಿಯ ವಿಜ್ಞಾನಿ ವಾಸುದೇವ ಕಲ್ಕುಂಟೆ ಅತ್ರೆ, ಜಾನಪದ ಕಲಾವಿದ ಎಂ. ಮಹದೇವ ಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾಲಯ ಈ ಬಾರಿ 28 ಸಾವಿರದ 581 ಮಂದಿ ವಿದ್ಯಾರ್ಥಿಗಳಿಗೆ ಪದವಿ, 5 ಸಾವಿರದ 677 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಿದೆ. ಎಸ್. ಪಿ. ಶರ್ಮಾ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.