ಮುಂಡಗೋಡ: ರೈತರು ಪರ್ಯಾಯ ಬೆಳೆಗಳನ್ನು ಬೆಳೆಯುದರಲ್ಲಿ ಆಸಕ್ತಿ ಹೊಂದಿರಬೇಕು ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವುದರಿಂದ ಲಾಭ ಮತ್ತು ನಷ್ಟದ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಬಾಗಲಕೋಟೆ ವಿಜ್ಞಾನಗಳ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿರಸಿ ಅಖಿಲ ಭಾರತ ಸಾಂಬಾರ ಬೆಳೆಗಳ ಸಂಶೋಧನಾ ಯೋಜನೆ ಮತ್ತು ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರ, ಮುಂಡಗೋಡ ಸಿಬಿಆರ್ಸೆಟಿ ವಿಸ್ತರಣಾ ಶಾಖೆ ಮತ್ತು ಶಿರಸಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ತೋಟಗಾರಿಕೆ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕೊಪ್ಪ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಎಸ್.ಸಿ.ಎಸ್.ಪಿ. ಯೋಜನೆಯಡಿಯಲ್ಲಿ ರೈತರಿಗೆ ಸೋಮವಾರ ಆಯೋಜಿಸಿದ್ದ ಕೃಷಿ ಪರಿಕರಗಳ ವಿತರಣೆ ಮತ್ತು ಕಾಳು ಮೆಣಸಿನ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾಳು ಮೆಣಸು ರೈತರ ಪಾಲಿಗೆ ಬಂಗಾರದ ಬೆಳೆಯಾಗಿದ್ದು ಇದನ್ನು ಲಾಭದಾಯಕ ಬೆಳೆಯಾಗಿ ಅಡಕೆ ತೋಟದಲ್ಲಿ ಬೆಳೆಯಲು ಯೋಗ್ಯವಾಗಿದೆ ಎಂದರು.
ಶಿರಸಿ ತೋಟಗಾರಿಕೆ ಮಹಾವಿದ್ಯಾಲಯದ ಡಾ.ಎನ್.ಕೆ.ಹೆಗಡೆ ಮಾತನಾಡಿ ತಾಲೂಕು ಕೃಷಿ ಭೂಮಿ ರೈತರ ಪಾಲಿಗೆ ವಾರದಾನವಾಗಿದ್ದು ಇಲ್ಲಿ ಮಲೆನಾಡು ಹಾಗು ಅರೆಮಲೆನಾಡು ಪ್ರದೇಶಗಳಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿದೆ. ರೈತರು ಬಹುಬೆಳೆ ಪದ್ಧತಿ ರೂಡಿಸಿಕೊಂಡಲ್ಲಿ ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದು ಎಂದರು.
ಧಾರವಾಡದ ತೋಟಗಾರಿಕೆ ಸಂಶೋಧನಾ ವಿಜ್ಞಾನ ಸಹ ಸಂಶೋಧನಾ ಕೇಂದ್ರ ಮತ್ತು ವಿಸ್ತರಣಾ ನಿರ್ದೇಶಕ ಡಾ.ಶಾಂತಪ್ಪ ತಿರಕಣ್ಣನವರ ಮಾತನಾಡಿ ರೈತರು ಸರ್ಕಾರ ಮತ್ತು ಸಂಶೋಧನಾ ಕೇಂದ್ರಗಳ ಮಾರ್ಗದರ್ಶನದ ಮೂಲಕ ಕಾಲ-ಕಾಲಕ್ಕೆ ಹೆಚ್ಚಿನ ಮಾಹಿತಿ ಪಡೆದು ಕೃಷಿ ತೋಟಗಾರಿಕೆಯನ್ನು ಮೈಗೂಡಿಸಿಕೊಂಡಲ್ಲಿ ಬದುಕು ಹಸನಾಗುತ್ತದೆ ಎಂದರು.
ಶಿರಸಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಸುದೀಶ ಕುಲಕರ್ಣಿ ಕಾಳು ಮೆಣಸು ಬೆಳೆಯುವ ಬಗ್ಗೆ ಸಾಕ್ಷ್ಯಚಿತ್ರ ತರಬೇತಿ ನೀಡಿದರು.ಇದೇ ಸಂದರ್ಭದಲ್ಲಿ ರೈತರಿಗೆ ಕಾಳು ಮೆಣಸಿನ ಸಸಿಗಳನ್ನು ವಿತರಿಸಲಾಯಿತು. ಕೆಂಜೋಡಿ ಗಲಬಿ, ಡಾ.ಅಬ್ದುಲ್ಕರೀಮ್, ಲಕ್ಷ್ಮಣ ಪಡಾನಾಡ, ಅಣ್ಣಪ್ಪ ನಾಯ್ಕ, ಮಹಾಬಲೇಶ್ವರ ನಾಯ್ಕ, ವಿನಾಯಕ ಸುಣಗಾರ, ಈರಯ್ಯ ಚಿಕ್ಕಮಠ ಮುಂತಾದವರು ಉಪಸ್ಥಿತರಿದ್ದರು.