ಯಲ್ಲಾಪುರ: ಜಿಲ್ಲೆಯಲ್ಲಿ ನಾಟಕ, ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಶ್ರೀಗುರು ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆಯ ವತಿಯಿಂದ ಸಚಿವ ಶಿವರಾಮ ಹೆಬ್ಬಾರ ಅವರ ಕಚೇರಿಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಚಿವರ ಅನುಪಸ್ಥಿತಿಯಲ್ಲಿ ಆಪ್ತ ಕಾರ್ಯದರ್ಶಿ ನಾಗರಾಜ ನಾಯ್ಕ ಮನವಿ ಸ್ವೀಕರಿಸಿದರು.
ಕರೊನಾ ಮೂರನೇಯ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಕೆಂಡ್ ಕಫ್ರ್ಯೂ ಹೇರಿ ಯಾವುದೇ ಸಭೆ ಸಮಾರಂಭ, ಮನರಂಜನಾ ಕಾರ್ಯಕ್ರಮ ನಡೆಸದಂತೆ ಆದೇಶ ಹೊರಡಿಸಿದೆ. ಇದರಿಂದ ಕಲಾವಿದರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಹಿಂದಿನ ವರ್ಷದ ಲಾಕ್ಡೌನ್ ದಿಂದ ಮೊದಲೇ ಕಲಾವಿದರು ತೊಂದರೆಯಲ್ಲಿದ್ದಾರೆ. ಕೆಲಸ ಇಲ್ಲದೇ ಕಲಾವಿದರ ಕುಟುಂಬ, ಮಕ್ಕಳ ಶಿಕ್ಷಣ ನಿಭಾಯಿಸಲೂ ಪರದಾಡುವಂತಾಗಿದೆ.
ಹಬ್ಬ ಹರಿದಿನ ಜಾತ್ರೆ,ಗಳಲ್ಲಿ ಕೋವಿಡ್ ನಿಯಮ ಅನುಸರಿಸಿ, ಕಲೆಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.ವೇದಿಕೆಯ ಜಿಲ್ಲಾಧ್ಯಕ್ಷ ಜೈರಾಮ ಭಟ್ಟ, ಪ್ರಧಾನ ಕಾರ್ಯದರ್ಶಿ ದಿಲೀಪ ದೊಡ್ಡಮನಿ, ಸಹ ಕಾರ್ಯದರ್ಶಿ ಮುರುಗೇಶ ಶೆಟ್ಟಿ ಇತರರಿದ್ದರು.