ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹರ್ ಘರ್ ದಸ್ತಕ್ (ಮನೆ ಮನೆಗೆ ಲಸಿಕೆ) ಅಭಿಯಾನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ವರ್ಚುವಲ್ ರೂಪದಲ್ಲಿ ಈ ಸಭೆ ನಡೆದಿದ್ದು, ಅಭಿಯಾನದಡಿ ಕೊರೋನಾವೈರಸ್ ಲಸಿಕೆ ನೀಡಿಕೆ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ಮಾಂಡವೀಯಾ, ಕೊರೋನಾ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಬಾವಿಸಬಾರದು ಎಂದಿದ್ದಾರೆ.
ಮೊದಲ ಡೋಸ್ ಕೋವಿಡ್ ಲಸಿಕೆಯನ್ನು ಪಡೆಯದ ಅಥವಾ ಎರಡನೇ ಡೋಸ್ ಪಡೆಯಲು ಅವಧಿ ಮೀರಿದರೂ ಲಸಿಕೆ ಪಡೆಯದೇ ಇರುವ ಎಲ್ಲಾ ಅರ್ಹರಿಗೆ ಲಸಿಕೆಯನ್ನು ಖಚಿತಪಡಿಸುವ ಗುರಿಯನ್ನು ಹರ್ ಘರ್ ದಸ್ತಕ್ ಅಭಿಯಾನ ಹೊಂದಿದೆ.
ಈ ತಿಂಗಳ 3 ರಂದು ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿ ಮನೆ ಬಾಗಿಲಿಗೆ ಲಸಿಕೆ, ಮನೆ ಮನೆಗೂ ಲಸಿಕೆ’ ಧ್ಯೇಯದೊಂಡಿದೆ ಪ್ರತಿ ಮನೆಯನ್ನು ತಲುಪುವಂತೆ ಆರೋಗ್ಯ ಕಾರ್ಯಕರ್ತರಿಗೆ ಮನವಿ ಮಾಡಿದ್ದರು.
ಅದರಂತೆ ಇನ್ನು ಮುಂದೆ ಕಡಿಮೆ ಲಸಿಕೆ ವ್ಯಾಪ್ತಿ ಇರುವ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಲಸಿಕೆಗಳನ್ನು ತೆಗೆದುಕೊಂಡು ಹೋಗಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ನ್ಯೂಸ್ 13