ಡೆಹ್ರಾಡೂನ್: ಚಳಿಗಾಲದ ಹಿನ್ನೆಲೆಯಲ್ಲಿ ಕೇದಾರನಾಥ ಮತ್ತು ಯಮುನೋತ್ರಿಯ ದ್ವಾರಗಳನ್ನು ಶನಿವಾರ ಮುಚ್ಚಲಾಗಿದೆ. ಮುಂದಿನ ಆರು ತಿಂಗಳ ಕಾಲ ಅದು ಮುಚ್ಚಿರಲಿದೆ ಎಂದು ಉತ್ತರಾಖಂಡ್ ಚಾರ್ ಧಾಮ್ ದೇವಸ್ತಾನಂ ಆಡಳಿತ ಮಂಡಳಿ ತಿಳಿಸಿದೆ.
ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಸೇರಿದಂತೆ ಉತ್ತರಾಖಂಡದ ನಾಲ್ಕು ಪುರಾತನ ಯಾತ್ರಾ ಸ್ಥಳಗಳ ಸಕ್ರ್ಯೂಟ್ ಅನ್ನು `ಚಾರ್ ಧಾಮ್’ ಎಂದು ಕರೆಯಲಾಗುತ್ತದೆ. ಬದರಿನಾಥ ದೇವಾಲಯವನ್ನು ನವೆಂಬರ್ 20 ರಂದು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಕೇದಾರನಾಥದ ಮಹಾದ್ವಾರಗಳನ್ನು ಮುಚ್ಚುವ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ ನಂತರ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯು ಹೊರಡಲಿದೆ. ಅದೇ ರೀತಿ ಯಮುನಾ ದೇವಿಯ ಪಲ್ಲಕ್ಕಿಯು ಜಾಂಕಿ ಚಟ್ಟಿ ಸಮೀಪದ ಖರ್ಸಾಲಿ ಗ್ರಾಮಕ್ಕೆ ತೆರಳಲಿದೆ.
ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಗಂಗೋತ್ರಿ ದೇಗುಲದ ದ್ವಾರಗಳನ್ನು ಶುಕ್ರವಾರ ಬೆಳಿಗ್ಗೆ 11.45 ಕ್ಕೆ ಮುಚ್ಚಲಾಗಿದೆ. ಸಮಾರಂಭವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಮತ್ತು ಸ್ಥಳೀಯ ಜನರು ಉಪಸ್ಥಿತರಿದ್ದರು. ಮುಂದಿನ ಆರು ತಿಂಗಳ ಕಾಲ ಗಂಗೋತ್ರಿಯ ದ್ವಾರಗಳನ್ನು ಮುಚ್ಚಲಾಗುತ್ತದೆ.
ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಅವರು ಅಧಿಕೃತ ಹೇಳಿಕೆಯಲ್ಲಿ, ಈ ವರ್ಷದಲ್ಲಿ 32,948 ಕ್ಕೂ ಹೆಚ್ಚು ಯಾತ್ರಿಕರು ಗಂಗೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ ಎಂದಿದ್ದಾರೆ. ಸೆಪ್ಟೆಂಬರ್ 16 ರಂದು ನೈನಿತಾಲ್ ಹೈಕೋರ್ಟ್ ಚಾರ್ ಧಾಮ್ ಯಾತ್ರೆಯ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ ಈ ವರ್ಷ ಸೆಪ್ಟೆಂಬರ್ 18 ರಂದು ಚಾರ್ ಧಾಮ್ ಯಾತ್ರೆ ಪ್ರಾರಂಭವಾಯಿತು.
ದೇವಸ್ತಾನಂ ಆಡಳಿತ ಮಂಡಳಿಯ ಪ್ರಕಾರ, ಅಕ್ಟೋಬರ್ 22 ರವರೆಗೆ ಈ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ನಾಲ್ಕು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುವ ಚಾರ್ ಧಾಮ್ಗಳು ಪ್ರತಿ ವರ್ಷ ಚಳಿಗಾಲದಲ್ಲಿ ಮುಚ್ಚಲ್ಪಡುತ್ತವೆ.
ನ್ಯೂಸ್ 13