ಮುಂಡಗೋಡ: ಇತ್ತಿಚೆಗೆ ರಾಜ್ಯ ಹೆದ್ದಾರಿ ಕಾತೂರು ಗ್ರಾಮದ ಹತ್ತಿರ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿ ಅವನ ಬಳಿಯಿದ್ದ 22ಸಾವಿರ ರೂ ಹಣ ದೋಚಿಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯದ ನಾಲ್ವರು ದರೋಡೆಕೋರರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ರಾಜಸ್ಥಾನ ರಾಜ್ಯದ ಜುಂಜುನು ಜಿಲ್ಲೆಯ ಮಹಿಪಾಲ್ ಲಕ್ಷ್ಮಣರಾಮ್ ಮೀನಾ(30), ಸಿಕರ್ ಜಿಲ್ಲೆಯ ರಾಕೇಶ ಚೋಟುರಾಮ ಮೋಹನಲಾಲ ವರ್ಮಾ(25), ಧಮೇಂದ್ರ ರಾಮಾಕಿಶನ್ ಟೈಲರ್(27), ರಾಹುಲ್ ಬ್ರಿಜಮೋಹನ ವರ್ಮಾ(23) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಅಶೋಕ ಬೋಲುರಾಮ ಮೀನಾ ತಲೆಮರಿಸಿಕೊಂಡಿದ್ದಾನೆ.
ಘಟನೆ ವಿವರ: 2021 ಜುಲೈ 31ರಂದು ಯಲ್ಲಾಪುರ ತಾಲೂಕಿನ ಮಂಚಕೇರಿ ಗ್ರಾಮದ ಅಬ್ದುಲ ಅಜಿಂ ಶೇಖ ಎಂಬುವರು ಲಾರಿಯನ್ನು ಚಾಲನೆ ಮಾಡಿಕೊಂಡು ಹುಬ್ಬಳ್ಳಿಯಿಂದ ಶಿರಸಿಗೆ ಹೊರಟಿದ್ದರು. ಮಾರ್ಗಮಧ್ಯೆ ಕಾತೂರ ಗ್ರಾಮದ ಸೇತುವೆ ಸಮೀಪ ಮೂತ್ರ ವಿಸರ್ಜನೆಗೆಂದು ಲಾರಿ ಚಾಲಕ ಅಬ್ದುಲ್ ಅಜಿಂ ಲಾರಿಯನ್ನು ನಿಲ್ಲಿಸಿದ್ದರು. ಮರಳಿ ಲಾರಿ ಹತ್ತುವಾಗ ಹಿಂದಿನಿಂದ ಬೊಲೇರೋ ವಾಹನದಲ್ಲಿ ಬಂದಿದ್ದ ನಾಲ್ಕು ಜನ ದರೋಡೆಕೋರರ ತಂಡ, ಲಾರಿ ಚಾಲಕನಿಗೆ ಕೈ, ಬಾಯಿ ಕಟ್ಟಿ ವಾಹನದಲ್ಲಿ ಅಪಹರಣ ಮಾಡಿಕೊಂಡು, ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹತ್ತಿರ ಚಾಲಕನನ್ನು ಬಿಟ್ಟು ಹೋಗಿದ್ದರು. ಲಾರಿ ಚಾಲಕನ ಬಳಿಯಿದ್ದ 22ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಗಬ್ಬೂರ ಬೈಪಾಸ್ ಹತ್ತಿರದ ಸಿಸಿ ಕ್ಯಾಮರಾಗಳನ್ನು ಮುಂಡಗೋಡದ ಮುಖ್ಯ ರಸ್ತೆಗಳಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಇಲ್ಲಿಯೂ ಲಾರಿಯನ್ನು ಬೊಲೇರೋ ವಾಹನ ಹಿಂಬಾಲಿಸಿರುವುದು ತನಿಖೆ ವೇಳೆ ಕಂಡುಬಂದಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಲಾರಿಯಲ್ಲಿ ಅಡಿಕೆ ತುಂಬಿರಬಹುದೆಂದು ನಿಪ್ಪಾಣಿಯಿಂದ ಲಾರಿಯನ್ನು ಹಿಂಬಾಲಿಸಿರುವುದಾಗಿ ಪೊಲೀಸರ್ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ರಾಜಸ್ಥಾನಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಲು ಮುಂದಾಗುತ್ತಿದ್ದಂತೆ, ಆರೋಪಿಗಳು ಪರಾರಿಯಾಗಿದ್ದರು. ನಂತರ ಬಿಜಾಪುರದ ದೇವರಹಿಪ್ಪರಗಿಯ ಪೊಲೀಸರು ಇದೇ ದರೋಡೆಕೋರರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಪ್ರಮುಖ ಆರೋಪಿಯನ್ನು ಹಿಡೆಯಲು ಬಲೆ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ ಎಸ್.ಬದರಿನಾಥ, ಶಿರಸಿ ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸೈ ಬಸವರಾಜ ಮಬನೂರ, ಪಿಎಸೈ ನಿಂಗಪ್ಪ ಜಕ್ಕಣ್ಣವರ್, ಎಎಸೈ ಚವ್ಹಾಣ ಸಿಬ್ಬಂದಿ ಧಮೇಂದ್ರ ನಾಯ್ಕ, ಗಣಪತಿ, ವಿನೋದಕುಮಾರ, ಅರುಣ ಬಾಗೇವಾಡಿ, ಶರತ್ ದೇಹಳ್ಳಿ, ಮಹೇಶ ಹತ್ತಳ್ಳಿ, ಅನ್ವರ ಖಾನ, ತಿರುಪತಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿದ್ದರು.