ಧರ್ಮ ಜಾಗೃತಿಗಾಗಿ ದಾಂಡೇಲಿಯಲ್ಲಿ ಘರ್ಜಿಸಿದ ಪ್ರಮೋದ್ ಮುತಾಲಿಕ್
ದಾಂಡೇಲಿ : ದೇವಸ್ಥಾನ, ಮಠ -ಮಂದಿರಗಳ ಹುಂಡಿಗೆ ಹಣ ಹಾಕುವುದಕ್ಕಿಂದ ಬಹುಮುಖ್ಯವಾಗಿ ಹಿಂದೂ ಧರ್ಮ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ಹಿಂದೂ ಧರ್ಮ ಬಾಂಧವರ ರಕ್ಷಣೆಗಾಗಿ ಮತ್ತು ಧರ್ಮದ ಉಳಿವಿಗಾಗಿ ಹಾಗೂ ಮತಾಂತರವನ್ನು ತಡೆಗಟ್ಟಲು ಜೀವದ ಹಂಗು ತೊರೆದು ಎದೆಯೊಡ್ಡಿ ನಿಲ್ಲುವ ಹಿಂದೂ ಸಂಘಟನೆಗಳಿಗೆ ಸಂಪೂರ್ಣವಾದ ತನು-ಮನ- ಧನದ ಬೆಂಬಲವನ್ನು ನೀಡುವುದನ್ನು ರೂಢಿಸಿಕೊಳ್ಳಬೇಕು. ಹಿಂದೂ ಬಾಂಧವರು ಶೌರ್ಯ ಮತ್ತು ಧೈರ್ಯವನ್ನು ಮೈಗೂಡಿಸಿಕೊಳ್ಳುವ ಮೂಲಕ ಸದೃಢ ಹಿಂದೂ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಶನಿವಾರ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಹೇಳಿದರು. ನಾವು ದೀಪಾವಳಿಯ ಸಂದರ್ಭದಲ್ಲಿ ಆಯುಧ ಪೂಜೆ ಮಾಡುವಾಗ ನಿಜವಾದ ಆಯುಧಗಳಿಗೆ ಪೂಜೆ ಮಾಡುತ್ತಿಲ್ಲ. ಹರಿತವಾದ ತಲ್ವಾರ್, ಕತ್ತಿ, ಚಾಕು ಇನ್ನಿತರ ಆಯುಧಗಳನ್ನು ಪೂಜೆಗೆ ಇಡಬೇಕು. ಅದನ್ನು ಇಡಲು ನಮಗೆ ಧೈರ್ಯವಿಲ್ಲದಂತಾಗಿದೆ. ಆಯುಧ ಪೂಜೆಯ ದಿನ ಪೊಲೀಸ್ ಠಾಣೆಗಳಲ್ಲಿ ಬಂದೂಕುಗಳಿಗೆ ಪೂಜೆ ಮಾಡುವ ರೀತಿಯಲ್ಲಿ ನಾವು ಸಹ ನಮ್ಮ ನಮ್ಮ ಮನೆಗಳಲ್ಲಿ ಧೈರ್ಯದಿಂದ ಆಯುಧಗಳನ್ನು ಇಟ್ಟು ಆಯುಧ ಪೂಜೆಯನ್ನು ಮಾಡಬೇಕು. ಇಂಥಹ ಆಯುಧಗಳು ಪೂಜೆಗಾಗಿಯೇ ಹೊರತು ಕುಕೃತ್ಯಗಳಿಗಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಗೋಮಾತೆಯನ್ನು ಕೊಲ್ಲುವ ಕಟುಕರ ಹಾಗೂ ಗೋಮಾಂಸವನ್ನು ಭಕ್ಷಿಸುವವರಿಂದ ನಮ್ಮ ದೇವಸ್ಥಾನಕ್ಕೆ ಹೂ ತೆಗೆದುಕೊಂಡು ಹೋಗುವುದು ನಿಲ್ಲಬೇಕು. ಅಂತವರ ಕಡೆಯಿಂದ ಹೂವನ್ನು ದೇವಸ್ಥಾನಕ್ಕೆ ಕೊಂಡೊಯ್ದು ದೇವರಿಗೆ ಅರ್ಪಿಸಿದರೆ ದೇವರು ವರ ಕೊಡುವುದಿಲ್ಲ, ಬದಲಾಗಿ ದೇವರ ಶಾಪಕ್ಕೆ ಗುರಿಯಾಗುತ್ತೇವೆ. ಹಾಗಾಗಿ ಪ್ರತಿಯೊಬ್ಬ ಹಿಂದೂ ಧರ್ಮ ಬಾಂಧವರು ತಮ್ಮ ತಮ್ಮ ಮನೆಗಳ ಆವರಣದಲ್ಲಿ ನೆಟ್ಟಿರುವ ಹೂವಿನ ಗಿಡಗಳ ಹೂವನ್ನೆ ದೇವರಿಗೆ ಅರ್ಪಿಸಬೇಕೆಂದು ಮುತಾಲಿಕ್ ಅವರು ಕರೆ ನೀಡಿದರು. ಗಣೇಶೋತ್ಸವ ಹಾಗೂ ಇನ್ನಿತರ ಹಬ್ಬ ಹರಿದಿನ, ಆಚರಣೆ ಹಾಗೂ ಮೆರಣಿಗೆಯ ಸಂದರ್ಭದಲ್ಲಿ ನಮ್ಮ ಯುವಕರು ಕುಡಿದು ಆಚರಣೆಯಲ್ಲಿ ಭಾಗವಹಿಸುತ್ತಿರುವುದು ಸರಿಯಲ್ಲ. ಮಹಿಳೆಯರು, ಸಹೋದರಿಯರು ಮದ್ಯ ಮಾರಾಟದ ವಿರುದ್ಧ ಸೆಟೆದು ನಿಲ್ಲಬೇಕು. ಈ ಹೋರಾಟಕ್ಕೆ ನಾನು ನಿಮ್ಮ ಜೊತೆ ಭಾಗಿಯಾಗುತ್ತೇನೆ. ಹಿಂದೂ ಧರ್ಮ ಹಾಗೂ ಹಿಂದೂ ಧರ್ಮೀಯರ ಸಂಘಟನೆಗಾಗಿ ಹಿಂದೂ ಸಮಾವೇಶ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ರಾಮನ 2ನೇ ಅವತಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬಂದಿರುವುದರಿಂದಲೇ 500 ವರ್ಷಗಳಿಂದಿದ್ದ ಅಯೋಧ್ಯೆ ರಾಮಮಂದಿರದ ವಿವಾದ ಬಗೆ ಹರಿದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಯಿತು. ಇದು ಹಿಂದೂ ಧರ್ಮೀಯರ ತಾಕತ್ ಎನ್ನುವುದು ಜಗಜ್ಜಾಹೀರಾಗಿದೆ ಎಂದರು. ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವನ್ನು ಸ್ವಾಗತಿಸಿದ ಮುತಾಲಿಕ್ ಅವರು ವಕ್ಫ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠ ಮಾನ್ಯಗಳ, ದಲಿತರ ಜಾಗವನ್ನು ಅತಿಕ್ರಮಣ ಮಾಡಿ ವಕ್ಫ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇದರ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು ಎಂದು ಟೀಕಿಸಿದರು.
ಇದಕ್ಕೂ ಮೊದಲು ಹಳೆನಗರ ಸಭೆಯ ಮೈದಾನದಿಂದ ಭವ್ಯ ಶೋಭಾ ಯಾತ್ರೆಯೂ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಹಳೆ ನಗರಸಭೆಯ ಮೈದಾನದಲ್ಲಿ ಸಂಪನ್ನಗೊಂಡಿತು.
ವೇದಿಕೆಯಲ್ಲಿ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು. ಹಿಂದೂ ಸಮಾಜೋತ್ಸವ ಸಮಿತಿಯ ವತಿಯಿಂದ ಪ್ರಮೋದ್ ಮುತಾಲಿಕ್ ಅವರನ್ನು ಸನ್ಮಾನಿಸಲಾಯಿತು. ಕಾವ್ಯಾ ಭಟ್ ಪ್ರಾರ್ಥನೆ ಗೀತೆ ಹಾಡಿದರು. ಸಂತೋಷ ಸೋಮನಾಚೆ ಸ್ವಾಗತಿಸಿ, ಪರಿಚಯಿಸಿದರು. ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಿಗಂಬರ್ ನಾಯ್ಕ ಅವರು ವಂದಿಸಿದರು. ವೀಣಾ ಕ್ಷೀರಸಾಗರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.