ಅಮ್ಮ ಒಂಭತ್ತು ತಿಂಗಳು ನಮ್ಮನ್ನು ಹೊತ್ತು ಹೆತ್ತಳು. ಆದರೆ ಅಪ್ಪ ಮಕ್ಕಳು ಭೂಮಿಗೆ ಬಂದ ಮೇಲೆ ಅವರ ಪೂರ್ಣ ಭಾರವನ್ನು ಹೊರುತ್ತಾನೆ. ಮಕ್ಕಳು ಹುಟ್ಟಿದ ಮೇಲೆ ಅಪ್ಪನಿಗೆ ಮಕ್ಕಳೇ ಪ್ರಪಂಚವಾಗುತ್ತಾರೆ. ಆ ಪ್ರಪಂಚದಲ್ಲಿ ಅಪ್ಪನಿಗೆ ತನ್ನ ಸ್ವಂತ ಕನಸು, ಆಸೆಗಳೆಲ್ಲ ಮಾಯವಾಗಿಬಿಡುತ್ತದೆ.
‘ಅಪ್ಪ’, ಯಾರು ಮಕ್ಕಳ ಆಸೆ- ಆಕಾಂಕ್ಷೆಗಳನ್ನು ಈಡೇರಿಸಲು ತನ್ನ ಸರ್ವಸ್ವವನ್ನೂ ಧಾರೆ ಎರೆದರೋ, ಮಕ್ಕಳ ಒಂದು ನಗುವನ್ನು ನೋಡಿ ಪೂರ್ಣ ದಿನವೆಲ್ಲ ಸಂಭ್ರಮಿಸಿದರೋ, ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿ ತಾನು ಹರಿದ ಎರಡು ಜೊತೆ ಬಟ್ಟೆಗಳಲ್ಲೇ ಜೀವನ ಸವೆಸಿದರಲ್ಲ ಅಪ್ಪ, ಆ ಜೀವಕ್ಕೆ ಬದುಕಿನುದ್ದಕ್ಕೂ ಋಣಿಯಾಗಿ ಇರಬೇಕು. ಅಪ್ಪನಿಗೂ ಸಾಲು ಸಾಲು ಕಷ್ಟಗಳು ಬಂದೊದಗಿದವು. ಆದರೆ ನಮ್ಮಪ್ಪ ಅದನ್ನು ನಮ್ಮೆದುರಿಗೆ ತೋರಿಸಿಕೊಳ್ಳಲೇ ಇಲ್ಲ, ಒಂದು ದಿನವೂ ಅದರ ಬಗ್ಗೆ ಹೇಳಲಿಲ್ಲ. ಮಕ್ಕಳಿಗೇಕೆ ತನ್ನ ಕಷ್ಟ ? ಎಂದು ಮುಚ್ಚಿಡುತ್ತಲೇ ಬಂದ.ಕಷ್ಟಗಳ ನಡುವೆಯೇ ಅಪ್ಪ ನಗುತ್ತಿದ್ದ. ಅದೆಷ್ಟು ಕಣ್ಣೀರು ಒಳಗೆ ಹೆಪ್ಪುಗಟ್ಟಿತೋ ಏನೋ!? ನಮಗೆ ಗೊತ್ತಾಗಲೇ ಇಲ್ಲ.
ಅಪ್ಪ ನಮ್ಮ ಬದುಕಿಗೆ ಆಲದಮರ ಇದ್ದ ಹಾಗೆ. ಮಕ್ಕಳ ಬದುಕಿಗೆ ಕಷ್ಟ ಎಂಬ ಸೂರ್ಯನ ಬಿಸಿಲು ತಾಕದೇ ಇರೋ ಹಾಗೆ ವಿಶಾಲ ಆಲದ ಮರದಂತೆ ಮರದಂತೆ ಕಾಪಾಡುತ್ತಾನೆ. ಅಪ್ಪನ ಸುರಕ್ಷೆಯ ನೆರಳು ಮಕ್ಕಳನ್ನ ಸದಾ ಪೊರೆಯುತ್ತೆ.
ತನ್ನ ಪೂರ್ಣ ಜೀವನವನ್ನ ಮಕ್ಕಳಿಗಾಗಿಯೇ ಮುಡಿಪಿಡುವ, ನಿಸ್ವಾರ್ಥವಾಗಿ ಬಾಳಿದ ಅಪ್ಪನನ್ನ ತಮ್ಮ ಸ್ವಾರ್ಥಕ್ಕಾಗಿ ವೃದ್ಧಾಶ್ರಮಕ್ಕೆ ಕಳುಹಿಸುವ ಇಂದಿನ ಸಮಾಜದ ಮೇಲೆ ಅಸಹ್ಯ ಭಾವನೆ ಹುಟ್ಟುತ್ತದೆ. ಎಂದೂ ಎದೆಗುಂದದ ಅಪ್ಪ ಆಗ ಸೋಲುತ್ತಾರೆ. ಯಾವ ಮಕ್ಕಳ ಗೆಲುವಿಗಾಗಿ ಅಪ್ಪ ಅಂದು ಸೋತಿದ್ದರೋ ಇಂದು ಅದೇ ಮಕ್ಕಳೇ ಅವರನ್ನು ಸೋಲಿಸುತ್ತಾರೆ. ಆದರೆ ಇಲ್ಲಿ ನಿಜವಾಗಿಯೂ ಸೋತಿದ್ದು ಮಕ್ಕಳೇ.
ಅಪ್ಪನಿಗಾಗಿ ಕೇವಲ ಒಂದು ದಿನವಲ್ಲ. ಬದುಕಿನ ಪ್ರತಿ ದಿನ, ಪ್ರತಿ ಕ್ಷಣವೂ ಅಪ್ಪನಿಗೇ ಅರ್ಪಿಸೋಣ. ಎಲ್ಲ ಅಪ್ಪಂದಿರಿಗೂ, ಅಪ್ಪನಾಗಿ ಬೆಳೆಸಿದ ಅಮ್ಮಂದಿರಿಗೂ ವಿಶ್ವ ತಂದೆಯರ ದಿನದ ಹಾರ್ದಿಕ ಶುಭಾಶಯಗಳು.