–ಮುಕ್ತಾ ಹೆಗಡೆ
ಸಾವಿರಾರು ಪ್ರಶ್ನೆಗಳು ತಲೆಯೊಳಗೆ ತಲೆಯೆತ್ತುತ್ತವೆ. ಅವುಗಳಿಗೆಲ್ಲಾ ‘ಉತ್ತರ’? ಎಂದಾಗ ಅಪ್ಪ ನೆನಪಾಗುತ್ತಾನೆ. ಬಾಲ್ಯದಿಂದಲೂ ಹಾಗೆಯೇ. ನನ್ನ ಪ್ರತಿ ಸಮಸ್ಯೆಗೂ,ಪ್ರಶ್ನೆಗೂ ಉತ್ತರವಿರುವುದು ಅಪ್ಪನಲ್ಲೇ ಎಂಬುದು ನಾನು ನಂಬಿದ ದೊಡ್ಡ ಸತ್ಯ.
ಅಪ್ಪ ಹೀಗೆಯೇ. ನನ್ನ ಅರ್ಥವಿಲ್ಲದ, ನನಗೆ ಅರ್ಥವಾಗದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾನೆ. “ಎಂತು ಅಂದ್ರೆ ಕಂದಾ” ಎಂದು ಅಪ್ಪ ಪ್ರಾರಂಭಿಸಿತ್ತಾನಲ್ಲಾ ಆಗ ನನಗೊಂದು ತೃಪ್ತಿ, ನಂತರ ಅದರ ಜೊತೆಗೆ ಮತ್ತೊಂದು ‘ಆದರೆ’ ಹುಟ್ಟಿಕೊಳ್ಳುತ್ತದೆ. ಮಾತುಗಳ ಮಧ್ಯವೇ ಪ್ರಶ್ನೆ ಕೇಳುವವಳು ನಾನು. ಅಪ್ಪ ಉತ್ತರಿಸಿತ್ತಾನೆ. ‘ಅಪ್ಪ’
ಅಪ್ಪನವನು.
ಹಲವಾರು ಬಾರಿ ಕ್ವಿಜ್ ನಲ್ಲೆಲ್ಲಾ ಗೆದ್ದು ಬರುತ್ತಿದ್ದೆನಲ್ಲಾ, ಪ್ರತಿಸಲ ಅಲ್ಲಿ ಬರುವ ಪ್ರಶ್ನೆಗಳು ಬೇರೆ ಬೇರೆ ಇರುತ್ತಿದ್ದವು. ಆದರೆ ನನಗೆ ಒಂದೇ ಭಾವ ಬರುತ್ತಿತ್ತು. ಏನು ಹೇಳಿ? ನಾನು ಸರಿ ಉತ್ತರ ಕೊಟ್ಟದ್ದೆಲ್ಲವೂ ಎಂದೋ ಅಪ್ಪ ಹೇಳಿದ್ದು ಎಂದು. ಹಾ ನಮ್ಮ ಊರು ಕೇರಿಯ ಗಡಿಯನ್ನು ಬಿಡಿ ಅಪ್ಪನಿಗೆ ದೂರದ ದೇಶದ ಗಡಿಯ ಬಗ್ಗೆಯೂ ಗೊತ್ತು. ಅಪ್ಪ ತನಗೆ ಗೊತ್ತಿರುವುದನ್ನೆಲ್ಲವನ್ನೂ ನನಗೆ ಕಲಿಸಿದ. ತನಗೆ ಬರುವ ಹಾಡು, ಗಣಿತ, ಯೋಗ, ಆಟ, ಜೀವನ ಕಲೆ, ತನ್ನ ಸಕಲವನ್ನೂ ನನಗೆ ಧಾರೆ ಎರೆದ. ನಡೆಸಿದ, ನಗಿಸಿದ, ತೋರಿಸಿದ, ಓದಿಸಿದ. ಆದರೆ ಅಪ್ಪ ಕಲಿಸಿದ ಯಾವುದನ್ನೂ ನಾನು ಪೂರ್ಣವಾಗಿ ಕಲಿಯಲೇ ಇಲ್ಲ. ಇದು ನನ್ನ ಬಾಳಿನ ಬಹು ದೊಡ್ಡ ಕೊರತೆ. ಅಪ್ಪ ಕಲಿಸಿದ್ದನ್ನು ಕಲಿಯದೇ ಇದ್ದದ್ದು. ಆದರೂ ಅಪ್ಪ ಇಂದಿಗೂ ಕಲಿಸುತ್ತಲೇ ಇದ್ದಾನೆ. ಜೀವನದ ನೂರು ಕೊರತೆಗಳನ್ನು ಮೀರಿ ಸಾವಿರ ನೆಮ್ಮದಿಯ ಮೂಲವನ್ನು ಹುಡುಕಲು ಕಲಿಸಿದ್ದು ಅಪ್ಪ. ಪುಟ್ಟ ಸೂರನಡಿ ಜಗತ್ತನ್ನೇ ನೋಡಲು ಕಲಿಸಿದ್ದು ಅಪ್ಪ, ತುಂತುರು ಎಂಬುದನ್ನೊಂದು ಕೈಗಿತ್ತು ‘ಓದು’ ಎಂಬ ಚಟದ ಲೋಕಕ್ಕೆ ಕರೆದೊಯ್ದದ್ದು, ತನ್ನ ಸಮಸ್ಯೆಯನ್ನು ನನಗೆ ತೋರಿಸದೇ ಭಾರತದ ಸಮಸ್ಯೆಗಳನ್ನೆಲ್ಲಾ ವಿವರಿಸಿ, ಚಿಕ್ಕ ಪುಟ್ಟ ವಿಷಯಗಳನ್ನು ದೇಶ ಮಟ್ಟದಲ್ಲಿ ಯೋಚಿಸುವಂತೆ ತಿಳಿಸಿದ್ದು, ಚವ್ವತ್ತಿಯ ಕಾಳು ಮೆಣಸಿನ ಬಳ್ಳಿಯಿಂದ ಆಗಸದ ವರೆಗೆ ತೋರಿಸಿದ್ದು, ಬದಿ ಮನೆಯ ವ್ಯಕ್ತಿಯಿಂದ ಜಗದ ಜನನಾಯಕ ಮೋದಿಜಿಯವರಿಗೆ ಪರಿಚಯಿದ್ದು ಇದೇ ಅಪ್ಪ. ಒಂದು ಕೆಲಸ ಮಾಡಿ ಸುಸ್ತು ಎಂದು ಗೋಗರೆಯುವಾಗ ನೆತ್ತಿಯ ಮೇಲೆ ನೇಸರ ಬಂದರೂ ತೆಂಗಿನಮರಕ್ಕೆ ಆರೈಕೆ ಮಾಡುತ್ತಾನಲ್ಲಾ ಅಪ್ಪ, ಅವನೇ ನೆನಪಾಗುತ್ತಾನೆ. ಇಂದು ನನ್ನ ಬರಹ, ಭಾಷಣ, ಓದು, ಹವ್ಯಾಸ ಎಲ್ಲದಕ್ಕೂ ‘ಅ’ಡಿ’ಪಾ’ಯ, ಈ ಎರಡಕ್ಷಗಳೇ. ಜಗತ್ತಿನ ಯಾವ ಶ್ರೇಷ್ಠ ಆದರ್ಶದ ಹಿಂದೆ ಬೀಳದಿದ್ದರೂ, ಅಪ್ಪನೆಂಬ ಜೀವದ ಜೊತೆಗಿದ್ದರೆ ಸಾಕು ಜೀವನ ಹಸನಾಗುತ್ತದೆ.