ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಈ ಹಿಂದಿನ ಸರ್ಕಾರದ ಆದೇಶದಂತೆಯೇ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗು ವೈದ್ಯರ ನೇಮಕ ಪ್ರಕ್ರಿಯೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿಯನ್ನು ರಚಿಸಿ, ಸಮಿತಿಯ ಎಲ್ಲರ ಜೊತೆಗೂಡಿ ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು, ಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಿ ಸರಕಾರದ ಮೇಲೆ ಒತ್ತಡ ತರುವ ಎಲ್ಲ ಪ್ರಯತ್ನ ಮಾಡುವ ನಿರ್ಧಾರವನ್ನು ಒಕ್ಕೊರಲಾಗಿ ಕೈಗೊಳ್ಳಲಾಯಿತು.
ಶನಿವಾರ ನಗರದ ನೆಮ್ಮದಿ ಕುಟೀರದಲ್ಲಿ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಶಿರಸಿ ಸರಕಾರಿ ಆಸ್ಪತ್ರೆಯ ಮುಂದಿನ ಹೋರಾಟದ ರೂಪುರೇಷೆ ಕುರಿತಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಸಹಮತದ ಮೇರೆಗೆ ಈ ನಿರ್ಧಾರವನ್ನು ಸಭೆಯು ಕೈಗೊಂಡಿತು.
ಸಭೆಯನ್ನುದ್ಧೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಆಸ್ಪತ್ರೆಯ ಕಟ್ಟಡ ಕೆಲಸಗಳು ನಡೆಯುತ್ತಿದ್ದು, 80% ಪ್ರತಿಶತ ಕಾಮಗಾರಿ ಮುಗಿದು ಹಲವಾರು ತಿಂಗಳಾದರೂ ಮುಂದಿನ ಹಂತದ ಯಾವುದೇ ಪ್ರಕ್ರಿಯೆಯು ಆರಂಭವಾಗಿತ್ತಿಲ್ಲ. ಕಳೆದ ಒಂದು ವರ್ಷದ ಹಿಂದೆಯೇ ವೈದ್ಯರ ನೇಮಕಾತಿ ಮತ್ತು ಯಂತ್ರೋಪಕರಣಗಳ ಖರೀದಿಗೆ ಪ್ರಸ್ತಾವನೆ ಕಳಿಸಿದ್ದರೂ ಸಹ, ಯಾವುದೇ ಪ್ರಕ್ರಿಯೆ ಸರಕಾರದಿಂದ ನಡೆದಿಲ್ಲ. ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸತತ ಪರಿಶ್ರಮದ ಕಾರಣಕ್ಕೆ ಕಟ್ಟಡ ನಿರ್ಮಾಣಕ್ಕೆ ರೂ.142 ಕೋಟಿ ಹಾಗು ಯಂತ್ರೋಪಕರಣಗಳ ಖರೀದಿಗಾಗಿ 30 ಕೋಟಿ ರೂಪಾಯಿಯನ್ನು ಮೀಸಲಿಟ್ಟು ಸರ್ಕಾರ ಆದೇಶ ನೀಡಿತ್ತು. ನಂತರದಲ್ಲಿ ಹಾಲಿ ಸರಕಾರದಲ್ಲಿ ಅದನ್ನು 5 ಕೋಟಿಗೆ ಇಳಿಸುವ ಕೆಲ ಪ್ರಯತ್ನಗಳೂ ನಡೆದಿತ್ತು. ಇದು ಕ್ಷೇತ್ರದ ಜನರಿಗೆ ಆತಂಕಕಾರಿ ವಿಚಾರವಾಗಿದೆ. ಆದರೆ ನಂತರ ನಿರಂತರವಾಗಿ ನಡೆದ ನಮ್ಮೆಲ್ಲರ ಹೋರಾಟದ ಫಲವಾಗಿ ಶಾಸಕರು, ಸಚಿವರು ಆಸ್ಪತ್ರೆ ಕುರಿತಾಗಿ ಈ ಮೊದಲಿನ ಆದೇಶದಂತೆಯೇ ಎಲ್ಲ ಅತ್ಯಾವಶ್ಯಕ ಯಂತ್ರೋಪಕರಣಗಳ ಜೊತೆಗೆ ಜಿಲ್ಲಾ ಆಸ್ಪತ್ರೆಯನ್ನಾಗಿ ಎಲ್ಲ ಕಾಮಗಾರಿ ನಡೆಯುವಂತೆ ಮಾಡಲಾಗುವುದು ಎಂದಿದ್ದರು. ಆದರೆ ಇದೀಗ ಆಸ್ಪತ್ರೆಗೆ ಸಂಬಂಧಿಸಿ ಮುಂದಿನ ಹಂತದ ಕಾಮಗಾರಿ, ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ಈ ಸಮಾನ ಮನಸ್ಕರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಮತ್ತು ಎಲ್ಲರ ಅಭಿಪ್ರಾಯದ ನಂತರ ಸೂಕ್ತ ನಿರ್ಧಾರವನ್ನು ಎಲ್ಲರ ಸಹಮತಿಯ ಮೇರೆಗೆ ಕೈಗೊಳ್ಳಲಾಗುವುದು ಎಂದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಪ್ರಸ್ತುತ ಸಾಲಿನ ಬಜೆಟಿನಲ್ಲಿ ಕೊಡಗು, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳುಗೆ ಹೆಚ್ಚುವರಿಯಾಗಿ ಮೆಡಿಕಲ್ ಕಾಲೇಜುಗಳ ನಿರ್ಮಾಣ ಪ್ರಸ್ತಾಪವನ್ನು ಸರಕಾರ ಮಾಡಿದೆ. ಆದರೆ ಈಗಾಗಲೇ ಘೋಷಣೆಯಾಗಿರುವ ಮೇಲ್ದರ್ಜೆಗೇರಿರುವ ಶಿರಸಿ ಸರಕಾರಿ ಆಸ್ಪತ್ರೆಯನ್ನು ಪೂರ್ಣಗೊಳಿಸುವ ಕೆಲಸ ನಡೆಯಬೇಕಿದೆ. ಈ ಜಾಗೃತಿ ಶಾಸಕರ, ಮತ್ಯಾರೋ ವಿರುದ್ಧದ ಹೋರಾಟವಲ್ಲ. ಬದಲಾಗಿ ಶಾಸಕರ ಕೈಯನ್ನು ಗಟ್ಟಿ ಮಾಡುವ ಕೆಲಸ ನಮ್ಮಿಂದ ನಡೆಯಬೇಕಿದೆ ಎಂದರು.
ನಿವೃತ್ತ ಇಂಜಿನಿಯರ್ ವಿ.ಎಂ. ಭಟ್ಟ ಮಾತನಾಡಿ, ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಕೌನ್ಸೆಲಿಂಗ್ ನಡೆಯುವ ಹಂತದಲ್ಲಿದೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಡಿಮೆ. ಹೀಗಿರುವಾಗ ಸರಕಾರ ನೇಮಕಾತಿ ಪ್ರಕ್ರಿಯೆ ತಡ ಮಾಡಿದರೆ ಮುಂದೆ ವೈದ್ಯರ ಲಭ್ಯತೆ ಅಷ್ಟು ಸುಲಭವಾಗಿ ದೊರಕುವುದಿಲ್ಲ. ಹಾಗಾಗಿ ಸರಕಾರ ಈ ಕೂಡಲೇ ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಿ ಎಂದು ಅವರು ಆಗ್ರಹಿಸಿದರು.
ಡಾ. ಕೆ.ವಿ. ಶಿವರಾಮ್ ಮಾತನಾಡಿ, ಶಿರಸಿಯ ಬಹುತೇಕ ಆಸ್ಪತ್ರೆಗೆ ಕೇವಲ ಇಲ್ಲಿಯ ಸ್ಥಳೀಯರು ಮಾತ್ರ ಬರುವುದಿಲ್ಲ. ಜೊತೆಗೆ ಶಿರಸಿಯ ಸುತ್ತಲಿನ 70-80 ಕಿ.ಮೀ. ಪ್ರದೇಶದಿಂದಲೂ ಅನೇಕರು ಪ್ರತಿನಿತ್ಯ ಬರುತ್ತಾರೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಆನವಟ್ಟಿ, ಹಾವೇರಿಯ ಜಿಲ್ಲೆಯ ಅನೇಕ ಕಡೆಗಳಿಂದ ಜನರು ಬರುತ್ತಾರೆ. ಹಾಗಾಗಿ ಆ ಭಾಗದ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದುಕೊಂಡು, ಅವರನ್ನೂ ಒಳಗೊಂಡು ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ನಡೆಯಲಿ ಎಂದರು.
ಕಾಂಗ್ರೆಸ್ ಮುಖಂಡ ಪ್ರವೀಣ ಗೌಡರ್ ತೆಪ್ಪಾರ್ ಮಾತನಾಡಿ, ಆಸ್ಪತ್ರೆ ವಿಚಾರದಲ್ಲಿ ಅನಂತಮೂರ್ತಿ ಹೆಗಡೆ ಅವರು ಜನಪರ ಹೋರಾಟಗಳನ್ನು ಮಾಡಿದ್ದಾರೆ. ಒಳ್ಳೆಯ ವಿಚಾರಕ್ಕೆ ನಮ್ಮ ಸಹಕಾರ ಎಂದಿಗೂ ಇದೆ. ಆಸ್ಪತ್ರೆಗಾಗಿ ಶಾಸಕ ಭೀಮಣ್ಣ ನಾಯ್ಕ, ಸಂಸದ ಕಾಗೇರಿಯವರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರೀತಿ-ಸ್ನೇಹಪರ ಭಾವನೆಗಳಿಂದ ಈ ಹೋರಾಟವನ್ನು ಸಂಘಟಿಸಬೇಕಿದೆ ಎಂದರು.
ನೆಗ್ಗು ಗ್ರಾ.ಪಂ. ಸದಸ್ಯೆ ಜ್ಯೋತಿ ಹೆಗಡೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ನನ್ನ ಮಗನನ್ನು ಉಳಿಸಿಕೊಳ್ಳುತ್ತಿದ್ದೆ. ಅನಾರೋಗ್ಯವಾದಾಗ ಮಾರ್ಗ ಮಧ್ಯೆ ಅವನನ್ನು ಕಳೆದುಕೊಂಡ ನೋವು ನನಗಿದೆ. ಆದರೆ ಈ ನೋವು ಬೇರೆ ಯಾವ ತಾಯಿಗೂ ಬರಬಾರದು. ಆ ಕಾರಣಕ್ಕೆ ಆಸ್ಪತ್ರೆ ಹೋರಾಟ ಕಾರ್ಯ ಶೀಘ್ರ ನಡೆಯಲಿ ಎಂದರು.
ಸಭೆಯಲ್ಲಿ ಕೆ.ಬಿ. ಲೋಕೇಶ ಹೆಗಡೆ, ಮನೋಹರ ಮಲ್ಮನೆ,ಡಾ. ಜಿ.ಎ.ಹೆಗಡೆ ಸೋಂದಾ, ಉಷಾ ಹೆಗಡೆ, ವಕೀಲರಾದ ಮನೋಜ ಪಂಡಿತ್, ಪ್ರಕಾಶ ಹೆಗಡೆ, ಜಯಶೀಲ ಗೌಡರ್ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯವನ್ನು, ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ರಂಗದ, ಅನೇಕ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ 70ಕ್ಕೂ ಅಧಿಕ ಚಿಂತಕರು ಭಾಗವಹಿಸಿದ್ದರು.
ಸರಕಾರಿ ಆಸ್ಪತ್ರೆ ಯಾರೊಬ್ಬರ ಸ್ವತ್ತಲ್ಲ. ಅದು ಕ್ಷೇತ್ರದ ಜನರ ಹಕ್ಕು. ಹಾಗಾಗಿ ಆಸ್ಪತ್ರೆ ಹೋರಾಟದಲ್ಲಿ ಎಲ್ಲ ಸಾರ್ವಜನಿಕರ ಅಭಿಪ್ರಾಯಗಳನ್ನು ಒಳಗೊಂಡು, ಅವರನ್ನು ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಆಯೋಜಿಸಲಾದ ಸಮಾನ ಮನಸ್ಕರ ಚಿಂತನ ಮಂಥನ ಸಭೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.