ಸಿದ್ದಾಪುರ: ಮಲೆನಾಡಿನಲ್ಲಿ ಮಳೆಗಾಲ ಆರಂಭವಾದ ಕೂಡಲೇ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಕೂಡಾ ಆರಂಭವಾಗುತ್ತದೆ. ಕಾರವಾರದ ನಿವಾಸಿ ಗಜಾನನ ಭಟ್ ಸಿದ್ದಾಪುರ ತಾಲೂಕಿನ ಕಸಿಗೆಯ ಕೇಶವನಾರಾಯಣ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿ ತಾಳಮದ್ದಲೆಯನ್ನು ನಡೆಸಿದರು.
ಪಾದುಕಾ ಪಟ್ಟಾಭಿಷೇಕ ಆಖ್ಯಾನದಲ್ಲಿ ಗಜಾನನ ಭಟ್ ತುಳಗೇರಿ ಭಾಗವತರಾಗಿ, ಮಂಜುನಾಥ ಹೆಗಡೆ ಕಂಚಿಮನೆ ಮದ್ದಳೆಕಾರರಾಗಿ ಭಾಗವಹಿಸಿದ್ದರು. ಪಾತ್ರ ವರ್ಗದಲ್ಲಿ ಹಿರಿಯ ವಿದ್ವಾಂಸ ಜಿ.ಎಲ್ ಹೆಗಡೆ ಕುಮಟಾ ದಶರಥ, ಗಣಪತಿ ಹೆಗಡೆ ಗುಂಜಗೋಡ ಕೈಕೇಯಿ, ಜಯರಾಮ ತಳವಾಟ ಶ್ರೀರಾಮ, ಜಿ.ಕೆ ಭಟ್ ಕಸಿಗೆ ಮಂಥರೆಯಾಗಿ ನಿರ್ವಹಿಸಿದರು.
ಗಜಾನನ ಭಟ್ ಕಾರವಾರದ ಸಿದ್ಧರದಲ್ಲಿ ಬದುಕನ್ನು ಕಟ್ಟಿಕೊಂಡವರು. ಹುಟ್ಟೂರಿನ ಅಧಿದೈವ ಕೇಶವನಾರಾಯಣನ ಅನನ್ಯ ಭಕ್ತರು. ಪ್ರತಿ ವರ್ಷ ಇಲ್ಲಿಗೆ ಬಂದು ಧಾರ್ಮಿಕ ಕಾರ್ಯಕ್ರಮ ನಡೆಸಿ ತಾಳಮದ್ದಲೆಯನ್ನು ನಡೆಸುತ್ತಾರೆ. ಭುವನೇಶ್ವರಿ ತಾಳಮದ್ದಲೆ ಕೂಟ ಭುವನಗಿರಿ ಇವರು ತಾಳಮದ್ದಲೆಯನ್ನು ನಡೆಸುತ್ತಾರೆ ಎಂದು ವಿವರಿಸಿದ ಎಲ್ಲರನ್ನು ಆರಂಭದಲ್ಲಿ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀಪಾದ ಭಟ್ಟ ಗೋವಾರವರು ತಾಳಮದ್ದಲೆ ಅಚ್ಚುಕಟ್ಟಾಗಿ, ಅತ್ಯುತ್ತಮವಾಗಿ ನಡೆಯಿತೆಂದು ವಿವರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಗಜಾನನ ಭಟ್ ರವರು ಎಲ್ಲಾ ಕಲಾವಿದರಿಗೆ ಶಾಲು ಹೊದೆಸಿ ಗೌರವಿಸಿದರು. ಕೇಶವನಾರಾಯಣ ದೇವ ಟ್ರಸ್ಟ. (ರಿ) ಕಾರ್ಯಕ್ರಮವನ್ನು ಆಯೋಜಿಸಿತ್ತು.