ಕಾರವಾರ; ಸ್ಥಳೀಯವಾಗಿ ಗುರುತಿಸಿ ನನ್ನನ್ನು ಸನ್ಮಾನಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿದ್ದು, ಮನತುಂಬಿ ಬಂದಿದೆ ಎಂದು ಕೈಗಾ ವಸತಿ ಸಂಕೀರ್ಣದ ಮಳೆ ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿದ ನೃತ್ಯ ವಿದುಷಿ ಶ್ರೀಮತಿ ಸ್ಮಿತಾ ಸುನೀಲ್ ಭಾವುಕರಾಗಿ ನುಡಿದರು.
ಮಳೆ ಹಬ್ಬ ಎಂಬ ಮೂರು ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೈಗಾ ವಸತಿ ಸಂಕೀರ್ಣದ ವೇದಿಕೆಯಲ್ಲಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲಿಯೇ ನಾನು ಸಾಧನೆ ಮಾಡಿದರೂ ಮನೆಯ ಅಂಗಳದಲ್ಲಿ ಪ್ರಶಸ್ತಿ ಪಡೆಯುವುದು ನಿಜಕ್ಕೂ ಧನ್ಯ ಭಾವ ಮೂಡಿಸಿದೆ ಎಂದು ನುಡಿದರು. ಕಳೆದ ಮೂರು ದಶಕಗಳಿಂದ ಭರತನಾಟ್ಯದ ಶಾಸ್ತ್ರೀಯ ಪದ್ಧತಿಯಲ್ಲಿ ಬಿಗಿ ಹಿಡಿತ ಸಾಧಿಸಿ ದೇಶದ ಉದ್ದಗಲಕ್ಕೂ ಪ್ರದರ್ಶನ ನೀಡುತ್ತಿರುವ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಹ್ಯಾದ್ರಿ ಸಂಘ ವಿಭಿನ್ನ ರಚನಾತ್ಮಕ ಮತ್ತು ಧನಾತ್ಮಕ ಕಾರ್ಯಗಳ ಮೂಲಕ ನಿರಂತರ ಕನ್ನಡ ಸೇವೆ ಹಾಗೂ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ನಮ್ಮಲ್ಲಿ ಹಲವು ಸಂಸ್ಕೃತಿಗಳ ಸಂಗಮವಿದ್ದರೂ ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮಗಳನ್ನು ಸಹ್ಯಾದ್ರಿ ಸಂಘ ಹಮ್ಮಿಕೊಳ್ಳುತ್ತಿದೆ. ರಾಜ್ಯಮಟ್ಟದ ಕಥಾಯಾನ, ಮೂರನೆ ರಾಜ್ಯ ಮಟ್ಟದ ಕವನ ಸ್ಪರ್ಧೆ ಸೇರಿದಂತೆ ಹಲವು ದೊಡ್ಡ ಕಾರ್ಯಕ್ರಮಗಳನ್ನು ಕೈಗಾದಲ್ಲಿ ಸಹ್ಯಾದ್ರಿ ಸಂಘ ಏರ್ಪಡಿಸುತ್ತಿದೆ’ ಎಂದು ಕಾರ್ಯಕ್ರಮ ಅಧ್ಯಕ್ಷರಾದ ಸೈಟ್ ಡೈರೆಕ್ಟರ್ ವಿನೋದಕುಮಾರ ಸಾಧಕರನ್ನು ಸನ್ಮಾನಿಸಿ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕವಿ ಹಾಗೂ ನಿರ್ಣಾಯಕ ಡಾ.ಅಜಿತ್ ಹೆಗಡೆ ಹರೀಶಿ, ಮಾತನಾಡುತ್ತಾ, ರಾಜ್ಯಮಟ್ಟದ ಕವನ ಸ್ಪರ್ಧೆಗೆ ಸೂಕ್ತ ಗುಣಮಟ್ಟದ ಕವನಗಳೇ ಬಂದಿರಲಿಲ್ಲ. ಕಾರಣ ದಿನಕ್ಕೊಂದು ಕವನ ಮತ್ತು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಅರ್ಜೆಂಟ್ ಪ್ರಸಿದ್ಧಿಯ ಹಪಾಹಪಿ ಇವತ್ತು ಕವಿಗಳ ಮತ್ತು ಬರಹಗಾರರ ಗುಣಮಟ್ಟ ಕುಸಿಯುವಂತೆ ಮಾಡಿದೆ, ಹೆಚ್ಚಿನವರು ದಿನವೂ ಬರೆಯುವ ಫೇಸ್ಬುಕ್ ಮತ್ತು ವಾಟ್ಸ್ಆಪ್ ಕವಿಗಳಾಗಿದ್ದಾರೆ, ಹೇಗಾದರೂ ವೇದಿಕೆಗಳನ್ನು ಬಳಸಿಕೊಳ್ಳುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಬದಲಿಗೆ ಕವಿಯಾಗುವವನಿಗೆ ಮೊದಲು ಅಧ್ಯಯನ ಶೀಲತೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆ ಮುಖ್ಯವಾಗಿರಬೇಕು. ಕೇವಲ ತನ್ನ ಬರಹ ಮಾತ್ರ ಪ್ರಥಮ ಆಯ್ಕೆಯಾಗಬಾರದು, ಇತರ ಸಾಧಕರನ್ನು ಬೆಂಬಲಿಸುವ ಮನಸ್ಥಿತಿ ಕವಿಗೆ ಬೇಕು. ಆದರೆ ಅದೇ ಇವತ್ತು ಕೊರತೆಯಾಗಿದೆ ಬರಹಗಾರನಿಗೆ ಬದ್ಧತೆಯೂ ಮುಖ್ಯ, ಎಂದು ಮಾರ್ಮಿಕವಾಗಿ ನುಡಿದರು.
ಸಾಹಿತ್ಯಗೋಷ್ಠಿ ಮತ್ತು ಸನ್ಮಾನದ ಪ್ರಸ್ತಾವನೆಯಲ್ಲಿ ಮಾತಾಡಿದ, ಸಾಹಿತಿ ಹಾಗೂ ಅಂಕಣಗಾರ ಸಂತೋಷಕುಮಾರ ಮೆಹೆಂದಳೆ,
`ಯಾವುದೇ ರಂಗದ ಸಾಧಕನಾದವನಿಗೆ, ಬರಹಗಾರರಿಗೆ ಸೌಜನ್ಯ ಮತ್ತು ಶಿಷ್ಠಾಚಾರವಿರಬೇಕು. ತನ್ನಂತೆ ಇತರರನ್ನು ಗಣಿಸಬೇಕು. ಹೊರತಾಗಿ ತಮ್ಮ ಸಮಯಕ್ಕೆ ಮಾತ್ರ ಅಗಮಿಸಿ ಉಳಿದ ಕವಿ ಸಾಧಕರನ್ನು ಕಡೆಗಣಿಸಿ ಕರ್ಯಕ್ರಮ ತೊರೆಯುವ ಪ್ರವೃತ್ತಿ ಮೂಲವಾಗಿ ಸಾಹಿತಿಯದ್ದು ಅಲ್ಲವೇ ಅಲ್ಲ. ವೇದಿಕೆಯ ಮೌಲ್ಯದ ಎದುರಿಗೆ ಉಳಿದೆಲ್ಲರೂ ಗೌಣ. ಆದರೆ ಈಗಿನ ಸಾಧಕರಿಗೆ ಕೇವಲ ಸನ್ಮಾನಕ್ಕೆ ಮಾತ್ರ ವೇದಿಕೆ ಬೇಕು, ಆದರೆ ವೇದಿಕೆಗಾಗಿ ಯಾವುದೇ ಬೆಂಬಲ ಮತ್ತೆ ಸೇವೆ ಸಲ್ಲಿಸುವ ಪ್ರವೃತ್ತಿ ಕುಸಿಯುತ್ತಿದೆ. ಕೇವಲ ತಮ್ಮ ಬರಹ, ಮರ್ನಾಲ್ಕು ಸಾಲು ಬರೆದು, ಅದಕ್ಕೆ ಪುಟಗಟ್ಟಲೇ ತಮ್ಮ ವಿವರಣೆ ಬರೆದುಕೊಳ್ಳುವ, ತಮ್ಮ ಸಮಯಕ್ಕೆ ಮಾತ್ರ ಬೆಲೆ ಎಂಬ ಹುಸಿ ಪ್ರಸಿದ್ಧಿಯಲ್ಲಿ ಬದುಕುತ್ತಿದ್ದಾರೆ’ ಎಂದು ಖೇದವ್ಯಕ್ತ ಪಡಿಸಿದರು.
ಮಳೆಹಬ್ಬದ ಕೊನೆಯ ದಿನದಲ್ಲಿ ತಬಲಾ ಪಟುಗಳಾದ ಬಯ್ಯಣ್ಣ ಮತ್ತು ಪ್ರದೀಪ ಹೆಗಡೆ, ಸಂಗೀತ ಕ್ಷೇತ್ರದ ರಘುಪತಿ ಮತ್ತು ಚನ್ನಕೇಶವ ಹಾಗೂ ಕ್ರೀಡಾ ಕ್ಷೇತ್ರದ ದಿಲೀಪ ಹಣಬರ ಇತರಿಗೆ ಸನ್ಮಾನಿಸಿದರೆ, ಕವನ ಸ್ಪರ್ಧೆಯ ವಿಜೇತರಾದ ಯಶಸ್ವಿನಿ ಮೂರ್ತಿ, ನಾಗೆಂದ್ರ ಹೆಬ್ಬಾರ್ ಮತ್ತು ಅರ್ಚನಾ ಹೆಬ್ಬಾರ ಅವರಿಗೆ ಬಹುಮಾನ ವಿತರಿಸಲಾಯಿತು. ಜಿ.ಪಿ.ಮಾರುತಿ, ಶ್ರೀಕಾಂತ ಸೋಗಿ, ಅಮೃತಾ ಮೆಹೆಂದಳೆ ಹಾಗೂ ಎಸ್.ಆರ್.ಎನ್ ಮೂರ್ತಿ ಕವಿಗೋಷ್ಠಿ ಮಾನದಂಡ ಪ್ರಕಾರ ಆಯ್ಕೆಯಾಗಿ ಪಾಲ್ಗೊಂಡಿದ್ದರು. ಸಮಿತಿ ಮಾನದಂಡ ಮೀರಿದ ಇತರರನ್ನು ವೇದಿಕೆ ಕೈಬಿಟ್ಟಿತ್ತು.
ಪ್ರಧಾನ ಕಾರ್ಯದರ್ಶಿ ಮೆಹೆಂದಳೆ ಸ್ವಾಗತಿಸಿ ಪ್ರಸ್ತಾವನೆ ಭಾಷಣ ಮಾಡಿದರೆ, ಅಧ್ಯಕ್ಷ ಜಿತೇಂದ್ರಕುಮಾರ ವಂದಿಸಿದರು. ಮುಖ್ಯ ಅಭಿಯಂತರುಗಳಾದ ಎಸ್.ಜೆ.ಟಿ ಸ್ವಾಮಿ ಮತ್ತು ವೆಂಕಟೇಶ ವೇದಿಕೆಯಲ್ಲಿದ್ದರು ಎಂದು ಕಾರ್ಯಕ್ರಮ ನಿರೂಪಿಸಿದ ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ ತಿಳಿಸಿದ್ದಾರೆ.