ಶಿರಸಿ: ಟಿಎಸ್ಎಸ್ ಲಿ., ಶಿರಸಿ ಪ್ರಧಾನ ಕಛೇರಿಯಲ್ಲಿ ಜೂ.13, ಶುಕ್ರವಾರದಂದು 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. II ರಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ (TOP 10 RANK) ಗಳಿಸಿದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ರಾಹಧನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪತ್ರ ಮತ್ತು ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ಎಸ್.ಎಸ್.ಎಸ್.ಸಿ. 58 ವಿದ್ಯಾರ್ಥಿಗಳು ಹಾಗೂ ಪಿ.ಯು.ಸಿ 04 ವಿದ್ಯಾರ್ಥಿಗಳು ಸೇರಿ ಒಟ್ಟೂ 62 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ ಮತ್ತಿಘಟ್ಟ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ಉನ್ನತ ಶಿಕ್ಷಣಕ್ಕೆ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುವ ವಿಚಾರ ತಿಳಿಸಿ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕುಟುಂಬದ ಆಸ್ತಿ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಹಾರೈಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಸನ್ಮಾನಿಸಲು ಹರ್ಷವೆನಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಟಿ.ಎಸ್.ಎಸ್.ನ ನಿರ್ದೇಶಕರಾದ ವಸಂತ ಹೆಗಡೆ ಶಿರಿಕುಳಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಐ.ಎ.ಎಸ್. ಕೆ.ಎ.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೃಷ್ಟಿಕೋನವಾಗಿರಿಸಿಕೊಂಡು ಅಭ್ಯಸಿಸುವ ಅನಿವಾರ್ಯತೆ ಇದೆ. ಲರ್ನ್ ಟುಡೇ ಲೀಡ್ ಟುಮಾರೋ (Learn Today Lead Tomorrow undefined) ಎಂಬ ಘೋಷವಾಕ್ಯವನ್ನು ನುಡಿಯುತ್ತ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ವಿದ್ಯಾರ್ಥಿಗಳ ಪರವಾಗಿ ಪಿಯು.ಸಿ II ರಲ್ಲಿ ರಾಜ್ಯಕ್ಕೆ ದ್ವೀತೀಯ ರ್ಯಾಂಕ್ ಪಡೆದ ದರ್ಶನ ಜಯಂತ ಹೆಗಡೆ ಕಬ್ಬಗಾರ್ ಮಾತನಾಡಿ ಸಂಘವು ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಧನ ನೀಡುವ ಕಾರ್ಯವನ್ನು ಅಭಿನಂದಿಸಿ ಯುವ ಜನರ ಅದರಲ್ಲೂ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ ಎಂದರು. ಹಳ್ಳಿಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಜನೆ ಪ್ರಾರಂಭಿಸಿದರೂ ನಂತರದ ದಿನಗಳಲ್ಲಿ ರ್ಯಾಂಕ್ ಪಡೆಯುವ ನಿಟ್ಟಿನಲ್ಲಿ ಯಾವ ರೀತಿ ಪ್ರಯತ್ನಶೀಲರಾದರು ಎಂಬ ವಿಚಾರ ತಿಳಿಸಿದರು. ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಶಗುಪ್ತಾ ಅಂಜುಮ್ ತಂದೆ ಮಾನ್ಜಾರುಲ್ ಮಾತನಾಡಿ ತಮ್ಮ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿ ಟಿ.ಎಸ್.ಎಸ್. ಪ್ರೋತ್ಸಾಹಧನ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಟಿ.ಎಸ್.ಎಸ್.ನ ನಿರ್ದೇಶಕರಾದ ಗಣಪತಿ ವಿ ಜೋಶಿ, ಪುರುಷೋತ್ತಮ ಹೆಗಡೆ, ಡಿ.ಎಸ್.ಹೆಗಡೆ, ಶ್ರೀಮತಿ ನಿರ್ಮಲಾ ರಾಘವ ಭಟ್ಟ ಹಾಗೂ ಫ್ರಭಾರ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ, ಸಂಘದ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶ್ರೀಮತಿ ರಶ್ಮಿ ವಿನಯ ಹೆಗಡೆ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಟಿ.ಎಸ್.ಎಸ್. ನ ಪರಿಣಿತ ನಿರ್ದೇಶಕರಾದ ನರಸಿಂಹ ಜಿ ಹೆಗಡೆ ಬಾಳೇಗದ್ದೆ ವಿದ್ಯಾರ್ಥಿಗಳು ಪುಸ್ತಕದ ಜ್ಞಾನಾರ್ಜನೆಯೊಂದಿಗೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪಾಲಕರನ್ನು ಅಭಿನಂದಿಸಿ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು.