Slide
Slide
Slide
previous arrow
next arrow

“ಜೂನ್ 14 ವಿಶ್ವ ರಕ್ತದಾನಿಗಳ ದಿನ”

300x250 AD

ಜೀವ ರಕ್ಷಕ ರಕ್ತದಾನಿಗಳ ಸೇವೆಗೆ ಪ್ರೀತಿಯಿಂದ ಶುಭ ಹಾರೈಸುವ ಸುದಿನವಿದು

ಅಂಕೋಲಾ : ವಿಜ್ಞಾನ ತಂತ್ರಜ್ಞಾನಗಳಲ್ಲಿ, ವೈದ್ಯಕೀಯ ರಂಗದಲ್ಲಿ ನಡೆದ ಮಹತ್ತರ ಪ್ರಗತಿಗಳು, ಅಚ್ಚರಿ ಬೆಳವಣೆಗೆಗಳು ನಾನಾ ರೀತಿಯಲ್ಲಿ ಜನಜೀವನವನ್ನೇ ಬದಲಾಯಿಸಿಯಾದರೂ ಒಂದು ಜೀವದ ಉಳಿವಿಗೆ ಬೇಕಾದ “ರಕ್ತ” ಎನ್ನುವ ಜೀವಾಮೃತಕ್ಕೆ ಪರ್ಯಾಯವಾಗಿ ಈವರೆಗೂ ಕೃತಕ ರಕ್ತ ತಯಾರಿಸಲು ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಏನೋ ವಿದ್ಯಾದಾನ, ಅನ್ನದಾನ, ನೇತ್ರದಾನಗಳಂತ ಮಹತ್ಕಾರ್ಯಗಳ ನಡುವೆ “ರಕ್ತದಾನವು” ತನ್ನದೇ ಆದ ಪವಿತ್ರತೆಯಿಂದ ಸರ್ವಶೇಷ್ಠ ದಾನವಾಗಿ ಗುರುತಿಸಿಕೊಂಡಿದೆ.

ರಕ್ತದಾನ : ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ರಕ್ತ ನೀಡಲು ಸಿದ್ಧನಿದ್ದು, ತುರ್ತುಸಂದರ್ಭಗಳಲ್ಲಿ ಅದರ ಅವಶ್ಯಕತೆರುವ ವ್ಯಕ್ತಿಗೆ ನೀಡಿದಾಗ ರಕ್ತದಾನ ಪ್ರಕ್ರಿಯೆ ನಡೆಯುತ್ತದೆ. ಅಂತಹ ರಕ್ತವನ್ನು ರಕ್ತ ವರ್ಗಾವಣೆಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆ ಮೂಲಕ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ.
ಹಲವೆಡೆ ರಕ್ತದಾನಿಗಳು ಹಣ ತೆಗೆದುಕೊಳ್ಳದೇ ಸ್ವಇಚ್ಛೆಯಿಂದ ಯಾರಿಗಾದರೂ ತನ್ನ ರಕ್ತದಿಂದ ಸಹಾಯವಾಗಲಿ ಎನ್ನುವ ಉದ್ದೇಶದಿಂದ ರಕ್ತದಾನ ಮಾಡುತ್ತಾರೆ. ಇನ್ನು ಕೆಲವೆಡೆ ತಮ್ಮ ಕುಟುಂಬ ಅಥವಾ ಸ್ನೇಹಿತರಿಗೆ ರಕ್ತ ವರ್ಗಾವಣೆ ಅವಶ್ಯವಿದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ.

ಯಾರೆಲ್ಲಾ ರಕ್ತದಾನ ಮಾಡಬಹುದು? : 16ರಿಂದ 60 ವರ್ಷದ ವಯೋಮಿತಿಯ ಕನಿಷ್ಠ 50 ಕೆ.ಜಿ. ತೂಕದ ಆರೋಗ್ಯವಂತ ವ್ಯಕ್ತಿಗಳೆಲ್ಲರೂ ನಿರ್ಭೀತಿಯಿಂದ ರಕ್ತದಾನ ಮಾಡಬಹುದು.

ರಕ್ತದಾನದ ಪ್ರಮಾಣ ಮತ್ತು ಪರಿಣಾಮವೇನು:: ಆರೋಗ್ಯವಂತ ವ್ಯಕ್ತಿಯಲ್ಲಿ ಸರಿಸುಮಾರು 5 ಲೀಟರ್ ರಕ್ತ ಹರಿಯುತ್ತಿದ್ದು, ಒಮ್ಮೆ ರಕ್ತದಾನ ಮಾಡಿದಾಗ ಆ ರಕ್ತದಾನದ ಪ್ರಮಾಣ ಕೇವಲ 200 ಮಿ.ಮೀ.ಗಳಿಂದ 550 ಮಿ.ಮೀ.ಗಳವರೆಗೆ ಆಧಾರಿತವಾಗಿರುತ್ತದೆ. ರಕ್ತದಾನದ ನಂತರ ಕೆಲವೇ ದಿನಗಳಲ್ಲಿ ರಕ್ತ ಮರುಪೂರಣಗೊಳ್ಳುತ್ತದೆ. ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರಿಂದ ರಕ್ತದಾನಿಗೆ ಚೈತನ್ಯವೂ ಬರುತ್ತದೆ. ಹಾಗೂ ರಕ್ತದಲ್ಲಿರುವ ಹಾನಿಕಾರಕ ಕೋಲೆಸ್ಟಾçಲ್ ಪ್ರಮಾಣ ಕಡಿಮೆಯಾಗಿ ರಕ್ತದಾನಿಯ ಆರೋಗ್ಯವೃದ್ಧಿಗೂ ಕಾರಣವಾಗುತ್ತದೆ.

ಯಾರೆಲ್ಲ ರಕ್ತದಾನ ಮಾಡಬಾರದು: ಅಪ್ರಾಪ್ತ ವಯಸ್ಕರು,50 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿರುವವರು, ಗರ್ಭೀಣಿ ಸ್ತ್ರೀಯರು, ಋತುಸ್ರಾವದ ಸಮಯದಲ್ಲಿರುವ ಮಹಿಳೆಯರು, ಅನಾರೋಗ್ಯ ಪೀಡಿತರು, ಸಾರಾಯಿ ಸೇವನೆ ಮಾಡಿದವರು, ಹೆಚ್ಚಿನ ರಕ್ತದೊತ್ತಡವಿರುವವರು, ವಿಷಕಾರಕ ಔಷಧಿ ಸೇವನೆ ಮಾಡುತ್ತಿರುವವರು, ಹೆಚ್‌ಐವಿ ಪೀಡಿತರು, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿರುವವರು, ಅಶಕ್ತರು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಇರುವವರು ರಕ್ತದಾನ ಮಾಡಬಾರದು ಈ ಮೇಲಿನ ಸಂದರ್ಭಗಳಲ್ಲಿ ರಕ್ತದಾನ ಮಾಡುವುದರಿಂದ ರಕ್ತದಾನಿ ಹಾಗೂ ರಕ್ತ ಪಡೆದವರಿಗೂ ಅಪಾಯವೇ ಹೆಚ್ಚು.

ರಕ್ತದ ಗುಂಪುಗಳು : ಮನುಷ್ಯನ ರಕ್ತವನ್ನು ಸಾಮಾನ್ಯವಾಗಿ A, B, AB ಮತ್ತು O ಎಂಬುದಾಗಿ ವಿಂಗಡಿಸಲಾಗುತ್ತದೆ. ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಆಂಟಿಜಿನ್ ಅಂಶಗಳನ್ನು ನೋಡಿ ವಿಂಗಡಿಸಲಾಗುತ್ತದೆ. ಆಂಟಿಜಿನ್ ಜೊತೆಗೆ ಆರ್ ಎಚ್ ಆಂಟಿಜಿನ್ ಆಧಾರ ಮೇಲೆ A+ve, A-ve, B+ve, B-ve, AB+ve, AB-ve, o+ve, o-ve, ಎಂಬುದಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ A+ve (ಎ ಪಾಸಿಟಿವ್) ಮತ್ತು o+ve (ಓ ಪಾಸಿಟಿವ್) ಗುಂಪುಗಳು ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. B -ve (ಬಿ ನೆಗೆಟಿವ್) ಮತ್ತು o-ve (ಓ ನೆಗೆಟಿವ್) ನಂತ ರಕ್ತದ ಗುಂಪುಗಳು ಬಹಳ ವಿರಳ. ಆದ್ದರಿಂದ ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಕಷ್ಟದ ಕೆಲಸ.
AB ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ AB ರಕ್ತದ ಗುಂಪಿನವರು A, B, AB ಮತ್ತು O ರಕ್ತದ ಗುಂಪಿನವರ ರಕ್ತ ಪಡೆಯಬಹುದು. ಆ ಕಾರಣಕ್ಕಾಗಿಯೇ AB+ve’ ರಕ್ತ ಗುಂಪನ್ನು ‘ಯುನಿರ್ವಸಲ್ ರಿಸೀವರ್’ ಎಂದು ಹೇಳುತ್ತಾರೆ.
‘O’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜಿನ್ ಇಲ್ಲದ ಕಾರಣ ‘O’ ಗುಂಪಿನ ರಕ್ತವನ್ನು A, B, AB ಮತ್ತು O ಗುಂಪಿನವರಿಗೆ ತುರ್ತುಪರಿಸ್ಥಿತಿಗಳಲ್ಲಿ ನೀಡಬಹುದು.
ಅದಕ್ಕಾಗಿಯೇ O-ve ರಕ್ತದಾನಿಗಳನ್ನು ‘ಯುನಿವರ್ಸಲ್ ಡೊನರ್’ ಎಂದು ಕರೆಯಲಾಗುತ್ತದೆ.

300x250 AD

ಜನಸಂಖ್ಯೆಗನುಗುಣವಾಗಿ ರಕ್ತದ ಗುಂಪಿನ ಅನುಪಾತ.
O+ve=39%
O-ve=1%
A+ve=27%
A-ve=0.5%
B+ve=25%
B-ve=0.4%
AB+ve=7%
AB-ve=0.1%
ಮೇಲೆ ತಿಳಿಸಿದ ಕಾರಣಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪನ್ನು ತಿಳಿದಿರಬೇಕು. ಅಪಘಾತ ಅಥವಾ ತುರ್ತುಪರಿಸ್ಥಿತಿಗಳಲ್ಲಿ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ರಕ್ತದ ಅವಶ್ಯಕತೆ ಒದಗಿ ಬಂದಲ್ಲಿ ಕಷ್ಟವಾಗುವುದು. ಆದ್ದರಿಂದ ತನ್ನ ಜೀವದ ಉಳಿವಿಗಾಗಿ ಮತ್ತು ಇತರ ಜೀವಗಳನ್ನು ಉಳಿಸಲು ಸಾಧ್ಯವಾದಷ್ಟು ರಕ್ತದಾನದ ಕುರಿತು ನಾವೇ ಸ್ವತಃ ಜಾಗೃತರಾಗಿರಬೇಕಲ್ಲದೇ, ಜೀವ ರಕ್ಷಕರಾದ ರಕ್ತದಾನಿಗಳ ಸೇವೆ ಮತ್ತು ಮಹತ್ಪವನ್ನು ಮನಸಾರೆ ಮೆಚ್ಚಿ ಅವರಿಗೆಲ್ಲ ತುಂಬು ಹೃದಯದ ಶುಭಾಶಯ ಸಲ್ಲಿಸುವ ಮೂಲಕ, ನಮ್ಮ ಪ್ರೀತಿ ಪಾತ್ರರ ಮತ್ತು ಅಕ್ಕ ಪಕ್ಕದವರಿಗೂ ಈ ವಿಷಯ ಮನದಟ್ಟು ಮಾಡಬೇಕೆನ್ನುವುದೇ ವಿಶ್ವ ರಕ್ತದಾನಿಗಳ ದಿವಸದ ಸಂದೇಶವಾಗಿದೆ.

ನಮ್ಮ ತಾಲೂಕು ಹಾಗೂ ಜಿಲ್ಲೆಯ ಹಲವೆಡೆ ವಿವಿಧ ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತಿತರರು ರಕ್ತದಾನ ಮಾಡುತ್ತಾ. ಆರೋಗ್ಯ ಇಲಾಖೆಯ ಸಹಕಾರದಲ್ಲಿ ರಕ್ತದಾನದ ಮಹತ್ವ ಮತ್ತು ಅವಶ್ಯಕತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೋವಿಡ್ ಸಂದರ್ಭದ ‘ಪ್ಲಾಸ್ಮಾ ಥೆರಪಿ’ ಬಗ್ಗೆ ಆಧುನಿಕ ವೈಧ್ಯಕೀಯ ಲೋಕದಲ್ಲಿ ಹೊಸ ಚಿಂತನೆ ಮತ್ತು ಪ್ರಯೋಗ ನಡೆಯುತ್ತಿದ್ದಂತೆ, ಡೆಂಗ್ಯೂ ಮತ್ತಿತರ ಮಾರಿಯಿಂದ ಬಚಾವಾಗಲು, ಇನ್ನಿತರೇ ತುರ್ತು ಸಂದರ್ಭಗಳಲ್ಲಿ ರಕ್ತದಾನದ ತೀವೃ ಅವಶ್ಯಕತೆ ಕಂಡು ಬರುತ್ತಿದೆ. ಯುವಜನರು ಹೆಚ್ಚು ಹೆಚ್ಚಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು. ಮತ್ತು ಇತರರಿಗೂ ರಕ್ತದಾನ ಮಹತ್ವ ತಿಳಿಹೇಳಬೇಕು. ನಮ್ಮ ತಾಲೂಕು, ಜಿಲ್ಲೆ, ಈ ನಾಡು, ದೇಶ ವಿದೇಶಗಳ ಸಮಸ್ತ ರಕ್ತದಾನಿಗಳಿಗೆ ಗೌರವಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
-ಚಿನ್ನದಗರಿ ಗೆಳೆಯರ ಬಳಗ ಅಂಕೋಲಾ- (ಉ.ಕ)

ರಕ್ತವನ್ನು ನೀಡಿ, ಭರವಸೆ ನೀಡಿ, ಒಟ್ಟಿಗೆ ನಾವು ಜೀವಗಳನ್ನು ಉಳಿಸುತ್ತೇವೆ ಎನ್ನುವ 2025 ರ ಧ್ಯೇಯ ವಾಕ್ಯ ಪಾಲಿಸಿ ರಕ್ತ ಮತ್ತು ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸೋಣ ಬನ್ನಿ

ವಿಲಾಸ ನಾಯಕ

Share This
300x250 AD
300x250 AD
300x250 AD
Back to top