ಸಿದ್ದಾಪುರ: ಉತ್ತಮ ಮನಸ್ಥಿತಿಯಿಂದ ಮಾತ್ರ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳಬಹುದಾಗಿದೆ. ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗದೇ ಉಳಿಸಿಕೊಂಡು ಬೆಳಸಬೇಕು ಎಂದು ಶಿರಳಗಿ ಶ್ರೀ ಚೈತನ್ಯ ರಾಜಾರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀವರ್ಚಿಸಿದರು.
ತಾಲೂಕಿನ ಹಾರ್ಸಿಕಟ್ಟಾದ ಗಜಾನನೋತ್ಸವ ಸಮಿತಿಯಲ್ಲಿ ವಿಶ್ವಾವಸು ಸಂವತ್ಸರದ ಯುಗಾದಿ ಉತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಆಶೀರ್ವಚನ ನೀಡಿದರು.
ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿ, ಜಗದ್ಗುರು ಶಂಕರರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಮನದಟ್ಟಾಗಿಸಬೇಕಿ. ಜೀವನದಲ್ಲಿ ಕಷ್ಟ-ಸುಖ ಸಹಜ. ಭಗವಂತನ ನಿರಂತರವಾಗಿ ನಾಮಸ್ಮರಣೆಯಿಂದ ಧೈರ್ಯದಿಂದ ಬದುಕಬೇಕು ಎಂದು ಶ್ರೀಗಳು ಹೇಳಿದರು.
ಆರ್ಎಸ್ಎಸ್ ವಿಭಾಗ ಸಂಚಾಲಕರಾ ಶ್ರೀಧರ ಹಿರೇಹದ್ದ ಮಾತನಾಡಿ, ಇಂದಿನ ಶಿಕ್ಷಣ ಪದ್ದತಿಯಲ್ಲಿ ಜೀವನ ಶಿಕ್ಷಣ ಮರೆಯಾಗಿದೆ. ಇದರಿಂದ ಮಕ್ಕಳು ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಧೈರ್ಯ ಹೊಂದಿಲ್ಲ. ಯಾವುದೋ ಇತಿಹಾಸ ಇಂದು ಪಾಠವಾಗುತ್ತಿದೆ. ನಮ್ಮ ನೆಲದ ನಿಜವಾದ ಇತಿಹಾಸ ತಿಳಿಯದಂತಾಗಿದೆ ಎಂದು ಹೇಳಿದರು.
ನಿವೃತ್ತ ಸೈನಿಕ ವಿನಾಯಕ ದೇವಾಸ ಮಾತನಾಡಿದರು. ಯುಗಾದಿ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಂದ್ರಶೇಖರ ಹೆಗಡೆ ಉಯ್ಯಾಲೆಮನೆ ಹಾಗೂ ವಿಕ್ರಮ ಹೆಗಡೆ ಹೊಸ್ಕೊಪ್ಪ ವೇದಘೋಷ ಮಾಡಿದರು. ಶಿಕ್ಷಕಿ ದಾಕ್ಷಾಯಣಿ ವಂದಿಸಿದರು. ರಮೇಶ ಹಾರ್ಸಿಮನೆ ಸ್ವಾಗಿತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಯುಗಾದಿ ಉತ್ಸವದ ಅಂಗವಾಗಿ ಹಾರ್ಸಿಕಟ್ಟಾ ಭೂತೇಶ್ವರ ಸನ್ನಿಧಿಯಿಂದ ಮುಠ್ಠಳ್ಳಿಯ ಶ್ರೀ ಜಗನ್ನಾಥ ದುರ್ಗಾವಿನಾಯಕ ದೇವಾಲಯದವರೆಗೆ ಅರವತ್ತಕ್ಕೂ ಹೆಚ್ಚು ಬೈಕ್ ಸವಾರರು ಬೈಕ್ ರ್ಯಾಲಿ ನಡೆಸಿ ಅಲ್ಲಿ ದೇವರ ದರ್ಶನ ಪಡೆದು ಪುನಃ ಹಾರ್ಸಿಕಟ್ಟಾವರೆಗೆ ಬೈಕ್ ರ್ಯಾಲಿ ನಡೆಸಿದರು.