ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ತತ್ಪರತೆ ಬೇಕು, ಉಳಿದವುಗಳಿಗೆ ಉದಾಸೀನತೆ ಮುಖ್ಯ. ಆಗ ಮೌಲ್ಯಗಳಿಂದ ಕೂಡಿದ ಬದುಕು ಸಾಧ್ಯ. ಜೀವನದಲ್ಲಿ ಮೌಲ್ಯಗಳಿಲ್ಲದ ಬದುಕು ಅಸುಂದರ. ನಾವು ನಮ್ಮನ್ನು ಅರಿತುಕೊಳ್ಳಲು ಪ್ರಯತ್ನಿಸುವುದೇ ಇಲ್ಲ, ಇಲ್ಲಿರುವ ನಮ್ಮ ಜೀವಾತ್ಮ, ಪರಮಾತ್ಮ ಸ್ವರೂಪಿಯಾಗಿದ್ದು ಚೈತನ್ಯಮಯವಾಗಿರುತ್ತಾನೆ. ನಾವು ಸದಾ ಮುಂದೆ ನೋಡುವವರು. ಹಿಂದಿರುಗಿ ನೋಡುವುದನ್ನೇ ಮರೆತಿದ್ದೇವೆ.ನಾಳೆ ಅನ್ನುವುದು ಹುಟ್ಟದಿರುವಾಗ, ನಿನ್ನೆ ಮರಣಿಸಿರುವಾಗ, ಇಂದಿನ ದಿನವನ್ನು ಆಚರಿಸದೆ ಬಿಟ್ಟಿರುವುದೇ ಎಲ್ಲಾ ಅನಾಹುತಕ್ಕೆ ನಾಂದಿ. ನಾವು ಹೇಗಿರುತ್ತೇವೆಯೋ ಹಾಗೆ ಅದು ಕನ್ನಡಿಯಲ್ಲಿ ಕಾಣುತ್ತದೆ. ಅದು ಕನ್ನಡಿಯ ತಪ್ಪಲ್ಲ ನಮ್ಮ ಓರೆ ಕೋರೆಗಳು ಮೌಲ್ಯಗಳು ಮೊದಲಿನಿಂದಲೂ ನಮ್ಮೊಂದಿಗೆ ಇರುತ್ತದೆ. ನಾವು ಅವೆಲ್ಲವನ್ನು ಅಳವಡಿಸಿಕೊಳ್ಳದೆ ಮುಗ್ಗರಿಸುತ್ತೇವೆ. ಅಹಂಕಾರ ಯಾರಿಗೂ ಒಳ್ಳೆಯದಲ್ಲ, ನಮ್ಮಲ್ಲಿ ಬೇಕು ಕಡಿಮೆಯಾಗಬೇಕು, ಸಾಕುಗಳು ಹೆಚ್ಚಾಗಬೇಕು. ಬೇಕೆನ್ನುವವನೇ ಬಡವ, ಸಾಕೆನ್ನುವವನೇ ಸಿರಿವಂತ. ಪಾರಮಾರ್ಥಿಕ ಸತ್ಯವೇ ಪವಿತ್ರವಾದದ್ದು, ಪ್ರತಿಯೊಬ್ಬರೂ ವೃಕ್ಷಾರಣ್ಯ ನ್ಯಾಯದ ಮನಸ್ಸನ್ನು ಹೊಂದಿದರೆ, ಸಹಬಾಳ್ವೆ, ಸಾಮರಸ್ಯ, ಸನಾತನ ಜೀವನದ ಸ್ಪಷ್ಟತೆ, ಶಾಂತಿ ನೆಮ್ಮದಿ ಸಾಧ್ಯ.
ಶ್ರೀರಾಮನ ವ್ಯಕ್ತಿತ್ವ ,ನಡೆ-ನುಡಿ, ಆಚಾರ ವಿಚಾರಗಳು, ಇಂತಹ ಮಹಾನ್ ವ್ಯಕ್ತಿಗಳನ್ನು ಅನುಸರಿಸಿದರೆ, ಅನುಕರಣೆ ಮಾಡಿದರೆ ಅದೇ ಮೌಲ್ಯಗಳು. ಮಹಾಜನೋ ಯೇನ ಗತ: ಸಪಂಥಾ: ಎಂದು ಉಮ್ಮಚಗಿಯ ವಿದ್ವಾನ್ ಮಹೇಶ್ ಭಟ್ಟರು ಜೀವನದಲ್ಲಿ ಮೌಲ್ಯಗಳು ಕುರಿತು ಗಾಯತ್ರಿ ಗೆಳೆಯರ ಬಳಗದಲ್ಲಿ ಆಶ್ರಯದಲ್ಲಿ ಉಪನ್ಯಾಸ ನೀಡಿದರು. ಮುಂದುವರಿದು ನಮ್ಮ ಸದಾಚಾರ, ಸದ್ವಿಚಾರಗಳು ನಮ್ಮ ಹಾಗೂ ಸ್ವಸ್ಥ ಸಮಾಜಕ್ಕೆ ಅಗತ್ಯ ಎಂದು ನುಡಿದರು.
ಆರಂಭದಲ್ಲಿ ಶ್ರೀಮತಿ ಜಾನಕಿ ಭಟ್ಟ ಹಾಗೂ ಸ್ವರಾಂಜಲಿ ಸಂಗೀತ ವಿದ್ಯಾ ಸಂಸ್ಥೆ ತಂಡದವರಿಂದ ಸುಶ್ರಾವ್ಯವಾದ, ಭಕ್ತಿ ಪೂರ್ಣ ಭಜನಾ ಕಾರ್ಯಕ್ರಮ ನೆರವೇರಿತು. ಅವರಿಗೆ ನಾರಾಯಣ ಹೆಗಡೆ ತಬಲಾದಲ್ಲಿ ಹಾಗೂ ಉನ್ನತಿ ಕಾಮತ ಹಾರ್ಮೋನಿಯಂ ನಲ್ಲಿ ಸಮರ್ಥವಾದ ಸಾಥ ನೀಡಿದರು.
ಬಳಗದ ಪ್ರೊ.ಡಿ ಎಂ ಭಟ್ಟ ಕುಳವೆ ಸ್ವಾಗತಿಸಿ, ಪ್ರಾಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಹೆಗಡೆ ಪರಿಚಯಿಸಿದರೆ, ಎಂ ಎಸ್ ಹೆಗಡೆಯವರು ವಂದನಾರ್ಪಣೆ ಸಲ್ಲಿಸಿ ಕಲಾವಿದರನ್ನು, ಉಪನ್ಯಾಸಕರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎನ್.ಹೊಸಮನಿ, ರಾಮ್ ಪೈ ಹುಲೇಕಲ್, ಲಕ್ಷ್ಮಣ ಶಾನಭಾಗ್, ಬಾಲಕೃಷ್ಣ ಕಾರಂತ, ಕಾಶಿನಾಥ ಹೆಗಡೆ,ಕೃಷ್ಣ ಪದಕಿ, ಪ್ರಭಾತ ಹೆಗಡೆ, ಸುರೇಶ ಹೆಗಡೆ ಸಂಕೊಳ್ಳಿ ,ಡಿ.ಎ.ಹೆಗಡೆ, ಎಲ್.ಜಿ.ಬಟ್ಟಗದ್ದೆ, ಕೃಷ್ಣವೇಣಿ ಹೆಗಡೆ, ಪಾರ್ವತಿ ಹೆಗಡೆ, ಕಮಲಾ ಭಟ್ಟ, ಗೀತಾ ಪಿ. ಆರ್ ಹೆಗಡೆ, ಮುಂತಾದ ಗಣ್ಯರು ಉಪಸ್ಥಿತರಿದ್ದರು.