ಯಲ್ಲಾಪುರ: ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವಾರದಲ್ಲಿ ಫೆ.12 ರಂದು ರಾತ್ರಿ 8.30ಕ್ಕೆ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಹಾಗೂ ಅತಿಥಿ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮನೋರಂಜನೆಯ ದೃಷ್ಟಿಗೆ ಸೀಮಿತವಾಗಿರದೇ ಗ್ರಾಮ-ರಾಜ್ಯ-ರಾಷ್ಟ್ರದ ಸುಭಿಕ್ಷೆಯ ಸಂಕಲ್ಪದೊಂದಿಗೆ ನಡೆಯುವ ಈ ಯಕ್ಷಗಾನದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದ್ದು, ಈ ಯಕ್ಷಗಾನವನ್ನು ರಾಮಕೃಷ್ಣ ಭಟ್ಟ ಬಾರೆ ಹಾಗೂ ಜಗದೀಶ ಭಟ್ಟ ಗೇರಾಳ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ್ದಾರೆ. ತಾಲೂಕಿನಲ್ಲಿ ಹನುಮಗಿರಿ ಮೇಳದ ಪ್ರಪ್ರಥಮ ಯಕ್ಷಗಾನ ಪ್ರದರ್ಶನ ಇದಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ಟ ಕಲ್ಲಡ್ಕ, ಮದ್ದಲೆ-ಚಂಡೆವಾದಕರಾಗಿ ಸುಬ್ರಹ್ಮಣ್ಯ ಭಟ್ಟ ದೇಲಂತಮಜಲು, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲರಾವ ಪುತ್ತಿಗೆ, ಚಕ್ರತಾಳದಲ್ಲಿ ನಿಶ್ವಥ್ ಜೋಗಿ ಭಾಗವಹಿಸುವರು. ವಾಸುದೇವ ರಂಗಾ ಭಟ್ಟ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮಕುಮಾರ ಕಟೀಲು, ಸಂತೋಷ ಹಿಲಿಯಾಣ, ರಕ್ಷಿತ ಶೆಟ್ಟಿ ಪಡ್ರೆ, ಮಹೇಶ ಎಡನೀರು, ಸದಾಶಿವ ಶೆಟ್ಟಿಗಾರ, ಜಗದಾಭಿರಾಮ ಪಡುಬಿದ್ರೆ, ಸದಾಶಿವ ಕುಲಾಲ, ದಿವಾಕರ ರೈ, ಜಗನ್ನಾಥ ಶೆಟ್ಟಿ ಪೆರ್ಲ, ಪ್ರಜ್ವಲಕುಮಾರ ಗುರುವಾಯನಕೆರೆ, ಪ್ರಸಾದ ಸವಣೂರು, ಶಿವರಾಜ ಬಜಕೂಡ್ಲು, ಮುಖೇಶ ದೇವಧರ, ಅಜಿತ ಪುತ್ತಿಗೆ, ಪ್ರಥ್ವೀಶ, ಕೀರ್ತನ ಕಾರ್ಕಳ, ಸತೀಶ ಎಡಮೊಗೆ, ರೂಪೇಶ ಆಚಾರ್ಯ, ಪೂರ್ಣೇಶ ಶೆಟ್ಟಿ ಕಟೀಲು ಪಾತ್ರ ನಿರ್ವಹಿಸಲಿದ್ದಾರೆ.ಅತಿಥಿ ಕಲಾವಿದರಾಗಿ ಉಮೇಶ ಶೆಟ್ಟಿ ಉಬರಡ್ಕ ಹಾಗೂ ಶಶಿಧರ ಕುಲಾಕ ಕನ್ಯಾನ ಪಾಲ್ಗೊಳ್ಳಲಿದ್ದಾರೆ. ತಾಲೂಕಿನಲ್ಲಿ ನಡೆಯುತ್ತಿರುವ ಅಪರೂಪದ ಈ ಯಕ್ಷಯಜ್ಞಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬಂದು ಯಶಸ್ವಿಗೊಳಿಸುವಂತೆ ಸಂಘಟಕರಾದ ರಾಮಕೃಷ್ಣ ಭಟ್ಟ ಬಾರೆ ಹಾಗೂ ಜಗದೀಶ ಭಟ್ಟ ಗೇರಾಳ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.
ಫೆ.12ಕ್ಕೆ ‘ಶ್ರೀದೇವಿ ಮಹಾತ್ಮೆ ಯಕ್ಷಗಾನ’
