ಶಿರಸಿ : ಪೋಲೀಸರ ಟೋಪಿಯ ವಿನ್ಯಾಸ ಬದಲಾಯಿಸಲು ಕರ್ನಾಟಕ ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು, ಇದನ್ನು ಆದಷ್ಟು ಶೀಘ್ರದಲ್ಲಿ ಅನುಷ್ಠಾನ ಮಾಡಿದಲ್ಲಿ ಪೊಲೀಸ್ ವ್ಯವಸ್ಥೆಗೆ ಹೊಸ ರೂಪ ಸಿಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಡಿಜಿಪಿ ಕಚೇರಿಯಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಕ್ಯಾಪ್ಗಳನ್ನು ಗೃಹ ಸಚಿವ ಡಾ.ಪರಮೇಶ್ವರ ಪರಿಶೀಲನೆ ನಡೆಸಿದ್ದು, ಇದು ರಾಜ್ಯ ಸರ್ಕಾರದ, ಗೃಹ ಸಚಿವರ ಶ್ಲಾಘನೀಯ ಕ್ರಮ ಎಂದರು.
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾದಲ್ಲಿ ಇರುವಂತಹ ಪಿ ಕ್ಯಾಪ್ ಮಾದರಿಯನ್ನು ಗೃಹ ಸಚಿವರು ವೀಕ್ಷಿಸಿದ್ದು, ಅದು ಅನುಷ್ಠಾನವಾದಲ್ಲಿ ಪೊಲೀಸರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಅನುಕೂಲ ಆಗಲಿದೆ ಎಂದು ತಿಳಿಸಿದರು.
ಈಗಿರುವ ಟೋಪಿಯ ಮಾಡೆಲ್ ಹಳೆಯದಾಗಿದ್ದು, ಭಾರವೂ ಹೆಚ್ಚಿದೆ. ಕಾರಣ ತೆಳುವಾದ ನೂತನ ಪಿ ಕ್ಯಾಪ್ ಮಾದರಿ ಅಗತ್ಯವಿದೆ ಎಂದಿರುವ ಸಂತೋಷ ಶೆಟ್ಟಿ, ಆದಷ್ಟು ಬೇಗ ಈಗಿರುವ ಟೋಪಿಯ ಬದಲಾವಣೆ ಮಾಡಲಿ ಎಂದು ಹೇಳಿದ್ದಾರೆ.