Slide
Slide
Slide
previous arrow
next arrow

ಸೂಕ್ತ ಶಿಕ್ಷಣದಿಂದ ಎಂತಹ ಸಾಧನೆಯಾದರೂ‌ ಸಾಧ್ಯ: ಪಿ.ಎಂ.ನಾಯ್ಕ್

300x250 AD

ಹೊನ್ನಾವರ: ಶಿಕ್ಷಣವಿದ್ದರೆ ಯಾವುದೇ ಸಾಧನೆ ಮಾಡಬಹುದು. ಜಿಲ್ಲೆಯು ಮುಂಬೈ ಪ್ರಾಂತಕ್ಕೆ ಸೇರಿದ್ದರಿಂದ ಶಿಕ್ಷಣದಲ್ಲಿ ಹಿಂದುಳಿಯುವಂತಾಯಿತು ಎಂದು ಲೆಫ್ಟಿನೆಂಟ್ ಕರ್ನಲ್ ಪಿ.ಎಮ್.ನಾಯ್ಕ ಹೇಳಿದರು.
ತಾಲೂಕಿನ ಅಳ್ಳಂಕಿಯ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಲವು ಸಾಧನೆ ಮಾಡಲು ಕಾಲೇಜು ಮಹತ್ತರ ಪಾತ್ರವಹಿಸುತ್ತಿದೆ ಎಂದರು.
ಹಿಂದಿನ 25 ವರ್ಷಗಳ ಅವಧಿಯಲ್ಲಿ ಕಾಲೇಜಿನ ಪ್ರಗತಿಗೆ ಶ್ರಮಿಸಿದ ಎಲ್ಲ ಶಾಸಕರು ಹಾಗೂ ಪಂಚಾಯತದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಮೋದ ನಾಯ್ಕ ಮಾತನಾಡಿ, ವಿಶ್ವ ಮಟ್ಟದಲ್ಲಿ ಪ್ರಬಲವಾಗುತ್ತಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸದೃಢ ವ್ಯಕ್ತಿತ್ವ ಬೆಳೆಸಿಕೊಂಡು, ದೇಶಕ್ಕಾಗಿ ದುಡಿವ ಸಂಕಲ್ಪ ಮಾಡಬೇಕು ಎಂದರು.
      ನೆಲ್ಲಿಕೇರಿ ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಮಾತನಾಡಿ, ಜಿಲ್ಲಾ ಮಟ್ಟದಲ್ಲೇ ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಕಾಲೇಜಿನ ಪ್ರಯೋಜನವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಲು ಕರೆ ನೀಡಿದರು. ಮಾಜಿ ಶಾಸಕ ಮಂಕಾಳ ವೈದ್ಯ, ಹಿಂದಿನ ಪ್ರಾಚಾರ್ಯ ಟಿ.ಬಿ.ನಾಯಕ, ಪಂಚಾಯತದ ಮಾಜಿ ಅಧ್ಯಕ್ಷ ಟಿ.ಟಿ.ನಾಯ್ಕ ಹಾಗೂ ವಿ.ಎನ್.ಭಟ್, ಚಂದ್ರಕಾಂತ ಕೊಚಡೇಕರ್ ಹಿಂದಿನ ದಿನಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮದಾಸ ನಾಯ್ಕ ಮಾತನಾಡಿ, ಕಾಲೇಜಿನ ಭವಿಷ್ಯದ ಪ್ರಗತಿಯ ಕನಸನ್ನು ತೆರೆದಿಟ್ಟು,ಎಲ್ಲರ ಸಹಕಾರವನ್ನು ಕೋರಿದರು. ಪಂಚಾಯತದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನ ಯೋಗ, ಭರತನಾಟ್ಯ, ಯಕ್ಷಗಾನ, ಪ್ರಹಸನ ಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಪುಸ್ತಕ ಹಾಗೂ ಚಿತ್ರ ಪ್ರದರ್ಶನಗಳು ಗಮನ ಸೆಳೆದವು.
ಮೂಡ್ಕಣಿ ನಾರಾಯಣ ಹೆಗಡೆಯವರ ಸ್ಮರಣಾರ್ಥ ನೀಡುವ ಪುರಸ್ಕಾರವನ್ನು ಭರತನಾಟ್ಯ ಕಲಾವಿದೆ ಪೂಜಾ ಹೆಗಡೆ ಹಾಗೂ ಚಿತ್ರ ಕಲಾವಿದ ಪ್ರದೀಪ ನಾಯ್ಕ ಇವರಿಗೆ ನೀಡಲಾಯಿತು. ‘ಬೆಳ್ಳಿ ಬೆಳಕು’ ಸ್ಮರಣ ಸಂಚಿಕೆ, ಉಪನ್ಯಾಸಕ ಕಿಶೋರ್ ನಾಯ್ಕ ಅವರ ‘ಮೊಗ್ಗು’ ಕವನ ಸಂಕಲನ ಹಾಗೂ ವಿಮಲಾ ನಾಯ್ಕ ಅವರ ‘ಶಾಯಿ ಸಾಲುಗಳು’ ಕಥಾ ಸಂಕಲನವನ್ನು ನಿತ್ಯಾನಂದ ಹೆಗಡೆಯವರು ಬಿಡುಗಡೆಗೊಳಿಸಿದರು. ಡಾ.ಜಿ.ಎಸ್.ಹೆಗಡೆ ಸ್ವಾಗತಿಸಿ, ಕಿಶೋರ್ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top