• Slide
    Slide
    Slide
    previous arrow
    next arrow
  • ಸಾರಾ ಅಬೂಬಕರ್’ರದ್ದು ಸ್ತ್ರೀ ಪರ ಚಿಂತನೆಯ ಸಾಹಿತ್ಯ: ಡಾ.ತೃಪ್ತಿ ನಾಯಕ

    300x250 AD

    ಕಾರವಾರ: ನಾಡಿನ ಹಿರಿಯ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರು ಯಾವುದೇ ಧರ್ಮದ ಹೆಸರಿನಲ್ಲಿ ಶೋಷಣೆಗೊಳಗಾದ ಮಹಿಳೆಯ ಮುಕ್ತಿಗೆ ಬೇಕಾಗುವ ಸಾಹಿತ್ಯವನ್ನು ನೀಡಿದರು. ಹೀಗಾಗಿ ಸ್ತ್ರೀ ಪರ ಚಿಂತನೆಯ ನಿಟ್ಟಿನಲ್ಲಿ ಅವರ ಸಾಹಿತ್ಯ ಬಹುಕಾಲ ನಿಲ್ಲುತ್ತದೆ ಎಂದು ಇಲ್ಲಿಯ ಬಂಗೂರನಗರ ಪದವಿ ಕಾಲೇಜಿನ ಉಪನ್ಯಾಸಕಿ ಡಾ.ತೃಪ್ತಿ ನಾಯಕ ಅವರು ಅಭಿಪ್ರಾಯಪಟ್ಟರು.
    ಅವರು ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ದಾಂಡೇಲಿ ತಾಲೂಕು ಘಟಕ ಹಮ್ಮಿಕೊಂಡ ‘ಹಣತೆ ಬೆಳಕಿನಲ್ಲಿ ಸಾರಾ ಅಬೂಬಕ್ಕರ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶೋಷಿತ ಮಹಿಳೆಯ ಬದುಕಿನ ತುಮುಲಗಳಿಗೆ ಪುರುಷವರ್ಗ ಪ್ರಾಮಾಣಿಕವಾಗಿ ಸ್ಪಂದಿಸಬೇಕಾದ ತರ್ತು ಇದೆ. ನಿಜದಲ್ಲಿ ಹಣತೆ ಈ ಮೂಲಕ ಸಾರಾ ಅಬೂಬಕ್ಕರ್ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದೆ ಎಂದರು.
    ಜನತಾ ವಿದ್ಯಾಲಯ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಪ್ರೊ. ಉಪೇಂದ್ರ ಘೋರ್ಪಡೆ ಅವರು ಸಾರಾ ಅಬೂಬಕ್ಕರ್ ತಮ್ಮ ಜೀವನಾನುಭವದ ಪಕ್ವತೆಯಿಂದ ಹಾಗೂ ತಮ್ಮ ಸುತ್ತಲಿನ ಪರಿಸರದ ನ್ಯೂನ್ಯತೆಗಳಿಗೆ ಪರಿಹಾರ ಕಲ್ಪಿಸುವ ಚಿಂತನೆಗಳನ್ನು ತಮ್ಮ ಬರವಣಿಗೆಗಳ ಮೂಲಕ ಸಮಾಜಕ್ಕೆ ನೀಡಿದವರು. ವಿಶೇಷವಾಗಿ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟು ಬರೆದವರು. ಪ್ರತಿಯೊಬ್ಬ ತಾಯಿ  ಶಿಕ್ಷಣ ಪಡೆದರೆ ಮನೆಯ ಸಂಸ್ಕಾರ, ಮಕ್ಕಳ ನಿಯಂತ್ರಣ ಮತ್ತು ನಿರ್ವಹಣೆಯ ಜೊತೆಗೆ ಕುಟುಂಬದ ಆರ್ಥಿಕ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬದು ಇವರ ನಿಲುವಾಗಿತ್ತು. ಸಾರಾ ಅವರ  ವಿಚಾರ ಮತ್ತು ಬರಹವನ್ನು ಕೇವಲ ಒಂದು ವರ್ಗದ ಮಹಿಳೆಯರ ಸಮಸ್ಯೆಗಳಿಗೆ ಸೀಮಿತಗೊಳಿಸಬಾರದು. ಸಾರಾ ಅಬೂಬಕ್ಕರ್ ತಮ್ಮ ಕೃತಿಗಳ ಮೂಲಕ ಎಂದೆಂದಿಗೂ  ಜೀವಂತರಾಗಿರುತ್ತಾರೆ ಎಂದು ಹೇಳಿದರು.
    ಹಣತೆ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್, ಸಾರಾ ಅಬೂಬಕ್ಕರ್ ಅವರ ಬಾಲ್ಯ ಹಾಗೂ ಬರವಣಿಗೆಯ ಪ್ರಮುಖ ಮೈಲಿಗಲ್ಲುಗಳನ್ನು ಚರ್ಚಿಸಿ ಅವರ ಸ್ತ್ರೀ ಸಂವೇದನೆ ಪರ ಬರವಣಿಗೆಗೆ ತಾವು ಬದುಕು ಸವೆದ ಪರಿಸರವನ್ನೇ ಬಳಸಿಕೊಂಡರು ಎಂದರು.
    ಪ್ರಾಸ್ತಾವಿಕವಾಗಿ ಮಾನತನಾಡಿದ ಸರಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ರೆಹಮಾನ್ ‘ಸಾರಾ ಅಬೂಬಕ್ಕರ್ ಅವರ ಒಂದೊಂದು ವೈಚಾರಿಕ ಕೃತಿಗಳು ಎಲ್ಲ ಸಮುದಾಯದ ಮಹಿಳೆಯರ ಶೋಷಣೆಯ ಬದುಕಿಗೆ ಪರಿಹಾರ ನೀಡುತ್ತದೆ ಎಂದರು. ಹಣತೆ ತಾಲೂಕು ಘಟಕದ ಅಧ್ಯಕ್ಷ ಹಾಗೂ ವಕೀಲ ರಾಘವೇಂದ್ರ ಗಡೆಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸದಸ್ಯರಾದ ನಾಗೇಶ ನಾಯ್ಕ ಸ್ವಾಗತಿಸಿದರೆ, ಅಕ್ರಂ ಖಾನ್ ವಂದಿಸಿದರು.
    ಕಾರ್ಯಕ್ರಮದಲ್ಲಿ ಪಿ.ವಿ.ಶಾನಬಭಾಗ್, ಮಾನವ ಹಕ್ಕು ಸಮಿತಿ ಅಧ್ಯಕ್ಷ ಫಿರೋಜ್ ಪಿರಜಾದೆ, ನಾಗರೇಖಾ ಗಾಂವಕರ, ಹನುಮಂತ ಕುಂಬಾರ, ವೆಂಕಮ್ಮ ಗಾಂವಕರ, ರುದ್ರಪ್ಪ ದೇಗಲೊಳ್ಳಿ, ಜಯದೇವಕುಮಾರ್ ಶಿರಿಗೆರೆ, ಬೀಜು ನಾಯ್ಕ, ಬಸವರಾಜ ತಳವಾರ ಮುಂತಾದ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top