ಕುಮಟಾ: ಮೂರೂರು ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಜಿ.ಎಸ್.ಗುಂಡ್ ಅವರನ್ನು ಭೇಟಿ ಮಾಡಿದ ಇಲ್ಲಿನ ಪಂಚಾಯತ್ ಸದಸ್ಯರು ಮತ್ತು ಊರಿನ ಪ್ರಮುಖರು, ಅಕ್ರಮ ಮದ್ಯ ವ್ಯಾಪಾರ ತಡೆಯುವಂತೆ ಒತ್ತಾಯಿಸಿದರು.
ಮೂರೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ವ್ಯಾಪಾರದ ಹಾವಳಿ ಹೆಚ್ಚಾಗಿದ್ದು, ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲೂ ಕುಡುಕರ ರಂಪಾಟ ಜಾಸ್ತಿಯಾಗಿದ್ದರಿಂದ ಮಹಿಳೆಯರು, ಮಕ್ಕಳು ಸಂಜೆ ಹೊತ್ತಿಗೆ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದ್ದು, ಅಕ್ರಮ ಮದ್ಯ ಮಾರಾಟ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಲಿಖಿತ ಮನವಿ ನೀಡಲು ನಿರ್ಧರಿಸಲಾಯಿತು. ಅದರಂತೆ ಈ ಮನವಿಯನ್ನು ಸಲ್ಲಿಸುತ್ತಿದ್ದು, ಈ ಸಂಬoಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಅಬಕಾರಿ ಉಪ ನಿರೀಕ್ಷಕ ಜಿ.ಎಸ್.ಗುಂಡ್ ಅವರು ಈ ಬಗ್ಗೆ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಮನವಿ ಸಲ್ಲಿಕೆಯಲ್ಲಿ ಮೂರೂರು ಗ್ರಾ.ಪಂ ಉಪಾಧ್ಯಕ್ಷೆ ಭಾರತಿ ನಾಯ್ಕ, ಸದಸ್ಯರಾದ ಆರ್.ವಿ.ಹೆಗಡೆ, ಹರ್ಷಾ ಹೆಗಡೆ, ಕೃಷ್ಣ ಗೌಡ, ಪ್ರಮುಖರಾದ ಟಿ.ಪಿ.ಹೆಗಡೆ, ಆರ್.ವಿ.ಹೆಗಡೆ, ಮಂಜುನಾಥ ನಾಯ್ಕ, ಮುರುಳಿ ಭಟ್, ಶಿವರಾಮ ಮಡಿವಾಳ, ರವಿ ಆಚಾರಿ ಇತರರು ಇದ್ದರು.
ಅಕ್ರಮ ಮದ್ಯ ವ್ಯಾಪಾರ ತಡೆಯುವಂತೆ ಒತ್ತಾಯ
![](https://euttarakannada.in/wp-content/uploads/2023/01/03kar10-1-730x438.jpg?v=1672811314)