• Slide
    Slide
    Slide
    previous arrow
    next arrow
  • ವಿಜ್ಞಾನ ನಾಟಕ ಸ್ಪರ್ಧೆ: ದಕ್ಷಿಣ ಭಾರತ ಮಟ್ಟಕ್ಕೆ  ಮಾರಿಕಾಂಬಾ ಪ್ರೌಢ ಶಾಲೆ ಆಯ್ಕೆ

    300x250 AD

    ಶಿರಸಿ: ಬೆಂಗಳೂರಿನಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಂಡ ನಗರದ ಮಾರಿಕಾಂಬಾ ಪ್ರೌಢಶಾಲಾ ಮಕ್ಕಳ ಒಂದು ಲಸಿಕೆಯ ಕಥೆ ನಾಟಕ  ರಾಜ್ಯ‌ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಗೊಂಡಿದೆ.

     ಬೆಂಗಳೂರಿನ ರಾಜರಾಜೇಶ್ವರಿ ನಗರದ ಡಯಟ್ ನಲ್ಲಿ ನಡೆದ ರಾಜ್ಯ‌ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ  ರಾಜ್ಯದ ಒಟ್ಟೂ ಆರು ವಿಭಾಗದಿಂದ ತಂಡಗಳು ಭಾಗವಹಿಸಿದ್ದವು. ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಗೊಂಡು ವಿಭಾಗ‌ಮಟ್ಟಕ್ಕೆ, ಬೆಳಗಾವಿ ವಿಭಾಗ ಮಟ್ಟದಿಂದ ರಾಜ್ಯ ಮಟ್ಟದ ಸ್ಪರ್ಧೆಗೆ ಮಾರಿಕಾಂಬಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಈ ಹಿಂದೆ ಆಯ್ಕೆ ಆಗಿದ್ದರು.

    ಸಾಂಕ್ರಾಮಿಕ ರೋಗಗಳ ವಿರುದ್ಧದಲ್ಲಿ ಕೆಲಸ‌ ಮಾಡುವ ಲಸಿಕೆಗಳ ಹುಟ್ಟು, ಅವುಗಳ ಬೆಳವಣಿಗೆ, ಜನರ ವಿರೋಧ ಇದ್ದರೂ ಅದನ್ನು ಎದುರಿಸಿ ಜನತೆಯ ಆರೋಗ್ಯ ರಕ್ಷಣೆಗೆ ಕಟಿಬದ್ಧರಾದ ವಿಜ್ಞಾನಿಗಳು ಹಾಗೂ ಅವರು ನೀಡಿದ ಕೊಡುಗೆಯ ಕುರಿತಾದ ಚಿತ್ರಣವನ್ನು ಹೊಂದಿದ ಒಂದು‌ ಲಸಿಕೆಯ ಕಥೆ ಮೂವತ್ತು‌ ನಿಮಿಷದಲ್ಲಿ ಶತಮಾನದ ಒಟ್ಟೂ ಸಾಧನೆ ಬಿಚ್ಚಿಟ್ಟಿವೆ ಎಂಬುದು ತೀರ್ಪುಗಾರರ ಮೆಚ್ಚುಗೆಗೆ ಕಾರಣವಾಗಿದೆ.

    ಇಡೀ ನಾಟಕದಲ್ಲಿ ವಿಜ್ಞಾನದ ಸಂಗತಿಯನ್ನು ಮನೋಜ್ಞವಾಗಿ ತೆರೆದಿಟ್ಟ ಬಗೆ ಹಾಗೂ ವಿದ್ಯಾರ್ಥಿಗಳ ಭಾವಪೂರ್ಣ ಲವಲವಿಕೆಯ ಅಭಿನಯವು  ಪ್ರೇಕ್ಷಕರ ಮನಗೆಲ್ಲಿಸಿ  ಪ್ರಥಮ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದವು.

    300x250 AD

    ಈ ನಾಟಕದಲ್ಲಿ  ತುಳಸಿ ಹೆಗಡೆ, ಎಂ.ವಿ ಶ್ರೇಯಾ, ಸ್ಪಂದನಾ ಭಟ್ಟ, ಜಯಶ್ರೀ ಭಟ್ಟ, ನವ್ಯಾ ಹೆಗಡೆ, ಶ್ರೀಜಾ ಭಟ್ಟ, ಮಾನ್ಯ ಹೆಗಡೆ, ಕಿಶನ್ ಕುಮಾರ ಹೆಗಡೆ , ದರ್ಶನ್ ಎಸ್. ಭಟ್, ಪ್ರತ್ವಿಕ್ ಮೋಹನದಾಸ ನಾಯಕ ಅಚ್ಚುಕಟ್ಟಾಗಿ ನಿರ್ವಹಿಸಿ ನಾಟಕ ಪರಿಣಾಮಕಾರಿಯಾಗಿಸಿದರು.   ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ಮಾರಿಕಾಂಬಾದ‌ ಕನ್ನಡ ಭಾಷಾ ಶಿಕ್ಷಕ ನಾರಾಯಣ ಭಾಗ್ವತ್ ನಿರ್ದೇಶನದ ನಾಟಕಕ್ಕೆ ವಿಜ್ಞಾನ ಶಿಕ್ಷಕಿ  ಜಯಲಕ್ಷ್ಮೀ ಗುನಗಾ ಅಚ್ಚುಕಟ್ಟಾಗಿ ನಿರ್ವಹಣೆ ನಡೆಸಿದ್ದರು. ಆಂಗ್ಲಾ ಭಾಷಾ ಶಿಕ್ಷಕ ಧರ್ಮಾನಂದ ಭಟ್ಟ ಸಹಕಾರ ನೀಡಿದರು.

    ದಕ್ಷಿಣ ಭಾರತ‌ ಮಟ್ಟದಲ್ಲಿ ಒಟ್ಟೂ ಏಳು ರಾಜ್ಯಗಳಿಂದ ಹದಿನಾಲ್ಕು ತಂಡಗಳು ಡಿಸೆಂಬರ್ 1,2 ರಂದು ಬೆಂಗಳೂರಿನಲ್ಲಿ ಸ್ಪರ್ಧೆ ನೀಡಲಿವೆ.  ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ ಆದ ಮಾರಿಕಾಂಬಾದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು  ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರಿ‌ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು,  ಶಿಕ್ಷಕ ವೃಂದ  ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top