Slide
Slide
Slide
previous arrow
next arrow

ಸಬ್ ರಜಿಸ್ಟರ್ ಕಚೇರಿ ಸ್ಥಳಾಂತರಕ್ಕೆ ಶಾಸಕ ಶೆಟ್ಟಿಯಿಂದ ಸ್ಥಳ ಪರಿಶೀಲನೆ

300x250 AD

ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಟ್ಟಡಕ್ಕೆ ಸಬ್ ರಜಿಸ್ಟರ್ ಕಚೇರಿಯನ್ನು ಸ್ಥಳಾಂತರಿಸುವ ಕುರಿತು ಶಾಸಕ ದಿನಕರ ಶೆಟ್ಟಿ ಸೋಮವಾರದಂದು ಸ್ಥಳ ಪರಿಶೀಲಿಸಿದರು.
ಜಿಲ್ಲಾ ನೋಂದಣಾಧಿಕಾರಿಯವರಿಗೆ ಕರೆ ಮಾಡಿ ಸ್ಥಳಾಂತರವಾಗುವ ಸಬ್ ರಜಿಸ್ಟರ್ ಕಚೇರಿಗೆ ಕಂಪ್ಯೂಟರ್‌ಗಳನ್ನು ಸಮರ್ಪಕವಾಗಿ ಅಳವಡಿಸಲು ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸಬ್ ರಜಿಸ್ಟರ್ ಕಚೇರಿ ಖಾಸಗಿ ಕಟ್ಟಡದ ಮಹಡಿಯ ಮೇಲಿದ್ದು, ವಯಸ್ಸಾದವರಿಗೆ, ಮಹಿಳೆಯರಿಗೆ, ವಿಶೇಷಚೇತನರಿಗೆ ಕಷ್ಟವಾಗುತ್ತದೆ. ಅದನ್ನು ಸ್ಥಳಾಂತರಿಸಬೇಕು ಎಂದು ವಕೀಲರ ಸಂಘದವರು ವರ್ಷದ ಹಿಂದೆಯೇ ಬೇಡಿಕೆ ಇಟ್ಟಿದ್ದರು. ಹಳೇ ಡಿಎಫ್‌ಓ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಆರಂಭದಲ್ಲಿ ಚರ್ಚೆ ನಡೆದಿತ್ತು. ಚತುಷ್ಪಥ ಹೆದ್ದಾರಿಯ ಪಕ್ಕದಲ್ಲಿರುವುದರಿಂದ ಓಡಾಡಲು ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ಕಟ್ಟಡ ಸೂಕ್ತ ಸ್ಥಳ ಎಂದು ವಕೀಲರ ಸಂಘದವರು ಸಲಹೆ ನೀಡಿದರು.
ಈ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ಮಾತನಾಡಿ, ಕಟ್ಟಡದಲ್ಲಿ ಅಗತ್ಯ ದುರಸ್ತಿ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಿದ್ದೆ. ಆ ಪ್ರಕಾರವಾಗಿ ಮಾಡಿಕೊಟ್ಟಿದ್ದಾರೆ. ನೆಟ್‌ವರ್ಕ್ ಸಮರ್ಪಕವಾಗಿರುವಂತೆ ಸಿಸ್ಟಂ ಅನ್ನು ಶೀಘ್ರದಲ್ಲಿ ಅಳವಡಿಸುವಂತೆ ಜಿಲ್ಲಾ ನೋಂದಣಾಧಿಕಾರಿಯವರಿಗೆ ಮಾತನಾಡಿದ್ದೇನೆ. ಇನ್ನೊಂದು ವಾರದಲ್ಲಿ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ವಕೀಲರ ಸಂಘದ ಕೆ.ವಿ.ನಾಯ್ಕ, ಸಬ್ ರಜಿಸ್ಟರ್ ಕಚೇರಿ ಈಗಿರುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಸ್ಥಳಾಂತರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದೆವು. ಶಾಸಕರು ಬೇಡಿಕೆಗೆ ಸ್ಪಂದಿಸಿದ್ದು, ಅವರ ಪ್ರಯತ್ನದ ಫಲವಾಗಿ ಸ್ಥಳಾಂತರಕ್ಕೆ ಆದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ವಿಜು ಕಾಮತ, ನಾಗರಾಜ ಭಟ್, ಮಹೇಶ ಮೇಸ್ತ, ದತ್ತಾತ್ರೆಯ ಮೇಸ್ತ, ಮುಖಂಡ ರವಿ ನಾಯ್ಕ ರಾಯಲಕೇರಿ, ವಕೀಲರಾದ ಎಲ್.ಆರ್.ನಾಯ್ಕ, ಎಸ್.ಜಿ.ಹೆಗಡೆ, ಪಿ.ಎಸ್.ಭಟ್, ಭಾಸ್ಕರ ಭಂಡಾರಿ, ಸರಕಾರಿ ವಕೀಲ ಪ್ರಮೋದ ಭಟ್, ಪಿಡಬ್ಲುಡಿ ಕಾರ್ಯನಿರ್ವಹಕ ಎಂಜಿನಿಯರ್ ಯೋಗಾನಂದ ಇಂಜನಿಯರ್ ಎಂ.ಎಸ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top