Slide
Slide
Slide
previous arrow
next arrow

ಮೀನುಗಾರರ ಅನುದಾನ ಶೀಘ್ರ ಬಿಡುಗಡೆಗೆ ಒತ್ತಾಯ

300x250 AD

ಕಾರವಾರ: ಉತ್ತರ ಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿದ ಮೀನುಗಾರರ ನಿಯೋಗ, ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಅನುದಾನ 2014-15ರಿಂದ 2017-18ರವರೆಗಿನ ಅಲ್ಪ ಪ್ರಮಾಣದ ಅನುದಾನ ಮತ್ತು ವಂತಿಕೆ ಹಾಗೂ 2018-19ರಿಂದ 2021-22ರವರೆಗಿನ ಪೂರ್ಣ ಪ್ರಮಾಣದ ಅನುದಾನ, ವಂತಿಕೆ ಹಾಗೂ ಕೋವಿಡ್ ಪರಿಹಾರ ಕುರಿತು ಶೀಘ್ರ ಬಿಡುಗಡೆಗೊಳಿಸುವಂತೆ ಮತ್ತೊಮ್ಮೆ ಚರ್ಚಿಸಲಾಯಿತು.

ಈ ಯೋಜನೆಯ ಹಣ ಬಿಡುಗಡೆಯಾಗದೆ ಇರುವುದರಿಂದ ಹಲವಾರು ಬಾರಿ ಮೀನುಗಾರರ ಒಕ್ಕೂಟದಿಂದ ಮನವಿ ನೀಡಿ ಚರ್ಚಿಸಲಾಗಿತ್ತು. ಆದಾಗ್ಯೂ ಇದುವರೆಗೆ ಬಿಡುಗಡೆಯಾಗದೆ ಇರುವ ಕುರಿತು ಫಲಾನುಭವಿಗಳು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಅಲ್ಲದೆ ಇಂತಹ ಸಂದರ್ಭದಲ್ಲಿ ಈ ಅನುದಾನ ಮೀನುಗಾರರಿಗೆ ಆಸರೆಯಾಗುತ್ತಿತ್ತು. ಆದರೆ ಇದುವರೆಗೂ ಬಿಡುಗಡೆಯಾಗದೆ ಇರುವುದು ಮೀನುಗಾರರಲ್ಲಿ ಅಸಮಾಧಾನ ತಂದಿದೆ ಎಂದು ಚರ್ಚೆಯಲ್ಲಿ ವಿವರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಹರಿಹರ ಹರಿಕಾಂತ ಮಾತನಾಡಿ, ಭಾರತ ದೇಶವು 75ರ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದು, ಪ್ರತಿ ಮನೆ ಮನೆಗಳಲ್ಲಿ ಸಂಭ್ರಮದ ಆಚರಣೆ ಸಿದ್ಧತೆ ನಡೆಯುತ್ತಿದೆ. ಆದರೆ ಮೀನುಗಾರರು ಕಳೆದ ಹಲವಾರು ವರ್ಷದಿಂದ ಈ ಯೋಜನೆಯಲ್ಲಿ ತಮ್ಮ ಹಣವನ್ನು ತೊಡಗಿಸಿಕೊಂಡು ಅತಂತ್ರರಾಗಿದ್ದಾರೆ. ಅವರ ಈ ದುಸ್ಥಿತಿಯಿಂದ ನಾವುಗಳು ಆ.15ರಂದು ಸಂಭ್ರಮಾಚರಣೆಯ ಬದಲು ತಮ್ಮ ಕಚೇರಿ ಎದುರು ಪ್ರತಿಭಟನೆ, ಧರಣಿ ನಡೆಸಬೇಕಾದ ಪ್ರಸಂಗ ಒದಗಿ ಬಂದಿದೆ ಎಂದು ಮನವರಿಕೆ ಮಾಡಿದರು.

300x250 AD

ಮನವಿ ಆಲಿಸಿದ ಜಂಟಿ ನಿರ್ದೇಶಕಿ ಕವಿತಾ, ಈ ಮಧ್ಯೆ ಕಳೆದ 1 ತಿಂಗಳಿನಿಂದ ನೂತನ ಜಂಟಿ ನಿರ್ದೇಶಕರ ಆಗಮನದಿಂದ ತಾಂತ್ರಿಕ ತೊಡಕಿನಿಂದಾಗಿ ವಿಳಂಬವಾಗಿದೆ. ಅಲ್ಲದೆ ನೂತನವಾಗಿ ಬಂದಿರುವ ಜಂಟಿ ನಿರ್ದೇಶಕರು ಜುಲೈ 30ರಂದು ನಿವೃತ್ತಿ ಹೊಂದಿರುವುದರಿಂದ ತಾಂತ್ರಿಕ ಅಡಚಣೆ ಉಂಟಾಗಿ ಈ ಮಧ್ಯೆ ಉತ್ತರ ಕನ್ನಡದಲ್ಲಿ ನೆರೆ ಪರಿಸ್ಥಿತಿಯಲ್ಲಿ ತೊಡಗಿಸಿಕೊಂಡಿರುವುದರಿಂದ ವಿಳಂಬವಾಗಿರುವ ಕುರಿತು ವಿವರಿಸಿದರು. ಸದ್ಯವೇ ಸದರಿ ಕಾರ್ಯದಲ್ಲಿ ತೊಡಗಿದ್ದು, ಕಚೇರಿಯ ಎಲ್ಲಾ ಸಿಬ್ಬಂದಿಗಳಿಗೆ ಈ ಯೋಜನೆ ಹಣ ಫಲಾನುಭವಿಗಳಿಗೆ ಒದಗಿಸಲು ಎಲ್ಲಾ ನಿರ್ದೇಶನ ನೀಡಲಾಗಿದೆ. ಅಲ್ಲದೆ ತಾನು ಖುದ್ದಾಗಿ ಈ ಕಾರ್ಯದಲ್ಲಿ ತೊಡಗಿ ಆ.15ರೊಳಗೆ ಸಾಧ್ಯವಾದಷ್ಟು ಫಲಾನುಭವಿಗಳಿಗೆ ತಲುಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ರಾಜು ಹರಿಕಂತ್ರ ಕಣಗಿಲ, ಫೆಡರೇಶನ್ ಸದಸ್ಯ ಶ್ರೀಧರ ಹರಿಕಂತ್ರ, ಹರಿಕಂತ್ರ ಸೊಸೈಟಿ ಪರವಾಗಿ ಸದಸ್ಯರು ಹಾಜರಿದ್ದರು.

Share This
300x250 AD
300x250 AD
300x250 AD
Back to top